ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಚಿಕ್ಕಪ್ಪರಿಗೆ ಹೇಳಿದರು: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳಿರಿ. ಪುನರುತ್ಥಾನ ದಿನದಂದು ನಾನು ಅದರ ಮೂಲಕ ನಿಮ್ಮ ಪರವಾಗಿ ಸಾಕ್ಷಿ ಹೇಳುವೆನು." ಅವರು ಹೇಳಿದರು: "ಕುರೈಷರು ನನ್ನನ್ನು ಆಕ್ಷೇಪಿಸುವರು ಮತ್ತು ಅವರು (ಸಾವಿನ) ಭಯದಿಂದ ಹಾಗೆ ಹೇಳಿದರು ಎಂದು ನನ್ನ ಬಗ್ಗೆ ಹೇಳುವರೆಂಬ ಭಯವಿಲ್ಲದಿರುತ್ತಿದ್ದರೆ ನಾನು ನಿನ್ನ ಮಾತನ್ನು ಒಪ್ಪಿ, ನಿನಗೆ ಸಂತೋಷ ಉಂಟಾಗುವಂತೆ ಮಾಡುತ್ತಿದ್ದೆ." ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು: "ತಾವು ಪ್ರೀತಿಸುವವರನ್ನು ಸನ್ಮಾರ್ಗಕ್ಕೆ ತರಲು ತಮಗೆ ಸಾಧ್ಯವಿಲ್ಲ. ಆದರೆ ಅಲ್ಲಾಹು ಅವನು ಬಯಸಿದವರನ್ನು ಸನ್ಮಾರ್ಗಕ್ಕೆ ತರುತ್ತಾನೆ." [ಕಸಸ್: 56].
Sahih/Authentic. - Muslim

ಚಿಕ್ಕಪ್ಪ ಸಾವಿನ ಅಂಚಿನಲ್ಲಿದ್ದಾಗ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರೊಡನೆ "ಲಾಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ) ಎಂದು ಹೇಳುವಂತೆ ಬೇಡಿಕೊಳ್ಳುತ್ತಾರೆ. ಅವರು ಅದನ್ನು ಹೇಳಿದರೆ, ಅದನ್ನು ಹಿಡಿದು ಪುನರುತ್ಥಾನ ದಿನದಂದು ನಾನು ತಮಗೆ ಶಿಫಾರಸು ಮಾಡುವೆನು ಮತ್ತು ತಾವು ಇಸ್ಲಾಂ ಸ್ವೀಕರಿಸಿದ್ದೀರಿ ಎಂದು ಸಾಕ್ಷಿ ನುಡಿಯುವೆನು ಎಂದು ಅವರು ಹೇಳುತ್ತಾರೆ. ಆದರೆ ಅಬೂತಾಲಿಬ್ ಸಾಕ್ಷಿವಚನಗಳನ್ನು ಉಚ್ಛರಿಸಲು ಅಸಮ್ಮತಿ ಸೂಚಿಸಿದರು. ಏಕೆಂದರೆ, ಅವರಿಗೆ ಕುರೈಷರು ಅವರನ್ನು ಆಕ್ಷೇಪಿಸುತ್ತಾ ಸಾವಿನ ಭಯದಿಂದ ಬಲಹೀನನಾಗಿ ಈತ ಅದನ್ನು ಹೇಳಿದ್ದಾನೆಂದು ಹೇಳುವರು ಎಂಬ ಭಯವಿತ್ತು. ಆದ್ದರಿಂದ ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಆ ಭಯವಿಲ್ಲದಿರುತ್ತಿದ್ದರೆ ನಾನು ಸಾಕ್ಷಿವಚನಗಳನ್ನು ಉಚ್ಛರಿಸಿ ನಿನಗೆ ಸಂತೋಷ ಉಂಟಾಗುವಂತೆ ಮಾಡುತ್ತಿದ್ದೆ ಮತ್ತು ನಿನ್ನ ಆಸೆಯನ್ನು ನೆರವೇರಿಸುತ್ತಿದ್ದೆ." ಆಗ ಸರ್ವಶಕ್ತನಾದ ಅಲ್ಲಾಹು ಈ ಆಯತ್ತನ್ನು ಅವತೀರ್ಣಗೊಳಿಸಿ, ಹೃದಯವನ್ನು ಪರಿವರ್ತಿಸಿ ಇಸ್ಲಾಂ ಸ್ವೀಕರಿಸುವಂತೆ ಮಾರ್ಗದರ್ಶನ ಮಾಡುವ ಶಕ್ತಿ ಪ್ರವಾದಿಯವರಿಗಿಲ್ಲ; ಅದು ಅಲ್ಲಾಹನಿಗೆ ಮಾತ್ರ ಇರುವ ಶಕ್ತಿಯಾಗಿದ್ದು, ಅವನು ಬಯಸಿದವರಿಗೆ ಅವನು ಆ ಮಾರ್ಗದರ್ಶನವನ್ನು ನೀಡುತ್ತಾನೆ; ಪ್ರವಾದಿಯವರಿಗೆ ಇರುವುದು ಕೇವಲ ಪುರಾವೆ, ವಿವರಣೆ ಮತ್ತು ನಿರ್ದೇಶನಗಳ ಮೂಲಕ ಸನ್ಮಾರ್ಗವನ್ನು ತೋರಿಸುವ ಹಾಗೂ ನೇರವಾದ ಮಾರ್ಗಕ್ಕೆ ಆಮಂತ್ರಿಸುವ ಅಧಿಕಾರ ಮಾತ್ರವಾಗಿದೆ ಎಂದು ಹೇಳುತ್ತಾನೆ.

  1. ಜನರ ಮಾತಿಗೆ ಹೆದರಿ ಸತ್ಯವನ್ನು ತ್ಯಜಿಸಬಾರದೆಂದು ಈ ಹದೀಸ್ ತಿಳಿಸುತ್ತದೆ.
  2. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಧಿಕಾರದಲ್ಲಿರುವುದು ಪುರಾವೆಗಳು ಮತ್ತು ನಿರ್ದೇಶನಗಳ ಮೂಲಕ ಸನ್ಮಾರ್ಗ ತೋರಿಸುವುದು ಮಾತ್ರವಾಗಿದೆ. ಹೃದಯವನ್ನು ಪರಿವರ್ತಿಸುವ ಅಧಿಕಾರ ಅವರಿಗಿಲ್ಲ.
  3. ಇಸ್ಲಾಂ ಧರ್ಮದ ಕಡೆಗೆ ಆಮಂತ್ರಿಸುವುದಕ್ಕಾಗಿ ರೋಗಿಯಾದ ಸತ್ಯನಿಷೇಧಿಯನ್ನು ಭೇಟಿ ಮಾಡಬಹುದೆಂದು ಈ ಹದೀಸ್ ತಿಳಿಸುತ್ತದೆ.
  4. ಎಲ್ಲಾ ಸ್ಥಿತಿಗಳಲ್ಲೂ ಜನರನ್ನು ಅಲ್ಲಾಹನ ಕಡೆಗೆ ಆಮಂತ್ರಿಸಲು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅತೀವ ಉತ್ಸಾಹ ತೋರುತ್ತಿದ್ದರೆಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!