ನವ್ವಾಸ್ ಬಿನ್ ಸಮ್‌ಆನ್ ಅನ್ಸಾರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಅಲ್ಲಾಹು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ. ಆ ನೇರ ಮಾರ್ಗದ ಎರಡು ಬದಿಗಳಲ್ಲೂ ಗೋಡೆಗಳಿವೆ. ಆ ಗೋಡೆಗಳಲ್ಲಿ ತೆರೆದುಕೊಂಡಿರುವ ಅನೇಕ ಬಾಗಿಲುಗಳಿವೆ. ಆ ಬಾಗಿಲುಗಳಲ್ಲಿ ಪರದೆಗಳನ್ನು ಹಾಕಲಾಗಿದೆ. ಆ ನೇರ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಕೂಗಿ ಹೇಳುತ್ತಿರುತ್ತಾನೆ: "ಓ ಜನರೇ! ನೀವೆಲ್ಲರೂ ನೇರ ಮಾರ್ಗವನ್ನು ಪ್ರವೇಶಿರಿ. ಅತ್ತಿತ್ತ ತಿರುಗದೆ ನೇರವಾಗಿ ನಡೆಯಿರಿ." ಆ ಮಾರ್ಗದ ಮೇಲ್ಭಾಗದಲ್ಲಿ ಒಬ್ಬ ವ್ಯಕ್ತಿಯಿದ್ದು, ಆ ಬಾಗಿಲುಗಳಲ್ಲಿ ಯಾವುದಾದರೂ ಬಾಗಿಲನ್ನು ತೆರೆಯಲು ಪ್ರಯತ್ನಿಸಿದರೆ, ಅವನು ಕೂಗಿ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಆ ಬಾಗಿಲನ್ನು ತೆರೆಯಬೇಡ. ನೀನು ಅದನ್ನು ತೆರೆದರೆ ಅದರ ಒಳಗೆ ಪ್ರವೇಶಿಸಿ ಬಿಡುವೆ." ಆ ನೇರ ಮಾರ್ಗವು ಇಸ್ಲಾಂ ಧರ್ಮವಾಗಿದೆ. ಆ ಎರಡು ಗೋಡೆಗಳು ಅಲ್ಲಾಹನ ಎಲ್ಲೆಗಳಾಗಿವೆ. ತೆರೆದುಕೊಂಡಿರುವ ಬಾಗಿಲುಗಳು ಅಲ್ಲಾಹು ನಿಷೇಧಿತ ವಲಯಗಳಾಗಿವೆ. ಆ ನೇರ ಮಾರ್ಗದ ಪ್ರವೇಶದ್ವಾರದಲ್ಲಿ ಕೂಗಿ ಕರೆಯುವುದು ಅಲ್ಲಾಹನ ಗ್ರಂಥವಾಗಿದೆ. ಆ ಮಾರ್ಗದ ಮೇಲ್ಭಾಗದಿಂದ ಕೂಗಿ ಕರೆಯುವುದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಉಪದೇಶಕವಾಗಿದೆ." Sahih/Authentic. - At-Tirmidhi
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ: ಅಲ್ಲಾಹು ಇಸ್ಲಾಂ ಧರ್ಮವನ್ನು ವಿವರಿಸಲು ನೇರ ಮಾರ್ಗದ ಒಂದು ಉದಾಹರಣೆಯನ್ನು ನೀಡುತ್ತಾನೆ. ಅದು ಉದ್ದಕ್ಕೆ ಚಾಚಿಕೊಂಡಿರುವ ಒಂದು ಮಾರ್ಗವಾಗಿದ್ದು ಅದರಲ್ಲಿ ಯಾವುದೇ ವಕ್ರತೆಗಳಿಲ್ಲ. ಆ ಮಾರ್ಗದ ಇಕ್ಕೆಲಗಳಲ್ಲಿ ಎರಡು ಗೋಡೆಗಳಿವೆ. ಆ ಗೋಡೆಗಳು ಆ ಮಾರ್ಗವನ್ನು ಎರಡು ಬದಿಗಳಿಂದಲೂ ಸುತ್ತುವರಿಯುತ್ತವೆ. ಈ ಗೋಡೆಗಳು ಅಲ್ಲಾಹನ ಗಡಿಗಳಾಗಿವೆ. ಈ ಎರಡೂ ಗೋಡೆಗಳಲ್ಲಿ ಅನೇಕ ಬಾಗಿಲುಗಳಿವೆ. ಇವು ಅಲ್ಲಾಹು ನಿಷೇಧಿಸಿದ ಕಾರ್ಯಗಳಾಗಿವೆ. ಆ ಬಾಗಿಲುಗಳಿಗೆ ಪರದೆಗಳನ್ನು ಹಾಕಲಾಗಿದ್ದು ಅದರೊಳಗಿರುವುದು ಹೊರಗಿನವರಿಗೆ ಕಾಣುವುದಿಲ್ಲ. ಆ ಮಾರ್ಗದ ಪ್ರವೇಶದ್ವಾರದಲ್ಲಿ ಒಬ್ಬ ವ್ಯಕ್ತಿಯಿದ್ದು ಆತ ಜನರಿಗೆ ಆದೇಶ ನಿರ್ದೇಶನಗಳನ್ನು ನೀಡುತ್ತಾ ಹೇಳುತ್ತಾನೆ: "ನೀವು ನೇರವಾಗಿ ನಡೆಯಿರಿ. ಅತ್ತಿತ್ತ ತಿರುಗಬೇಡಿ." ಇದು ಅಲ್ಲಾಹನ ಗ್ರಂಥ (ಕುರ್‌ಆನ್). ಆ ಮಾರ್ಗದ ಮೇಲ್ಭಾಗದಲ್ಲಿ ಇನ್ನೊಬ್ಬ ವ್ಯಕ್ತಿಯಿದ್ದಾನೆ. ನೇರಮಾರ್ಗದಲ್ಲಿ ನಡೆಯುವವರು ಆ ಬಾಗಿಲುಗಳಿಗೆ ಹಾಕಲಾದ ಪರದೆಗಳನ್ನು ಸ್ವಲ್ಪ ಸರಿಸಲು ಪ್ರಯತ್ನಿಸುವಾಗ ಆತ ಅವರನ್ನು ಗದರಿಸುತ್ತಾ ಹೇಳುತ್ತಾನೆ: "ನಿನಗೆ ದುರದೃಷ್ಟ ಕಾದಿದೆ! ಅದನ್ನು ತೆರೆಯಬೇಡ. ನೀನು ಅದನ್ನು ತೆರೆದು ಬಿಟ್ಟರೆ ಅದರೊಳಗೆ ಪ್ರವೇಶ ಮಾಡುವೆ. ಅದನ್ನು ಪ್ರವೇಶ ಮಾಡದಂತೆ ನಿನ್ನ ಮನಸ್ಸನ್ನು ನಿಯಂತ್ರಿಸಲು ನಿನಗೆ ಸಾಧ್ಯವಿಲ್ಲ." ಇದು ಪ್ರತಿಯೊಬ್ಬ ಮುಸಲ್ಮಾನನ ಹೃದಯದಲ್ಲಿರುವ ಅಲ್ಲಾಹನ ಕಡೆಯ ಆತ್ಮಸಾಕ್ಷಿಯಾಗಿದೆ.

explain-icon

ಹದೀಸಿನ ಪ್ರಯೋಜನಗಳು

  • ಇಸ್ಲಾಂ ಸತ್ಯ ಧರ್ಮವಾಗಿದೆ ಮತ್ತು ಅದು ನಮ್ಮನ್ನು ಸ್ವರ್ಗಕ್ಕೆ ಸೇರಿಸುವ ನೇರ ಮಾರ್ಗವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ.
  • ಅಲ್ಲಾಹನ ಎಲ್ಲೆಗಳನ್ನು ಅಂದರೆ ಅವನು ಅನುಮತಿಸಿದ್ದು ಮತ್ತು ನಿಷೇಧಿಸಿದ್ದನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಈ ವಿಷಯದಲ್ಲಿ ಅಸಡ್ಡೆ ಮಾಡಿದರೆ ಅದು ವಿನಾಶಕ್ಕೆ ಕೊಂಡೊಯ್ಯುತ್ತದೆ.
  • ಪವಿತ್ರ ಕುರ್‌ಆನಿನ ಶ್ರೇಷ್ಠತೆಯನ್ನು ಮತ್ತು ಅದರಂತೆ ಜೀವನ ನಡೆಸುವುದನ್ನು ಈ ಹದೀಸ್ ಉತ್ತೇಜಿಸುತ್ತದೆ. ಏಕೆಂದರೆ ಅದರಲ್ಲಿ ಮಾರ್ಗದರ್ಶನ, ಬೆಳಕು ಮತ್ತು ಯಶಸ್ಸು ಇದೆ.
  • ಅಲ್ಲಾಹನಿಗೆ ದಾಸರ ಮೇಲಿರುವ ದಯೆಯನ್ನು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಅವನು ಸತ್ಯವಿಶ್ವಾಸಿಗಳ ಹೃದಯದಲ್ಲಿ ಅವರು ವಿನಾಶಗಳಲ್ಲಿ ಒಳಪಡದಂತೆ ತಡೆಯುವ ಆತ್ಮಸಾಕ್ಷಿಯನ್ನು ಸ್ಥಾಪಿಸಿದ್ದಾನೆ.
  • ಅಲ್ಲಾಹು ಅವನ ದಯೆಯಿಂದ, ದಾಸರಿಗೆ ಅವರು ಪಾಪಗಳಲ್ಲಿ ಒಳಪಡದಂತೆ ತಡೆಯುವ ತಡೆಗಳನ್ನು ನಿರ್ಮಿಸಿದ್ದಾನೆ.
  • ವಿಷಯಗಳನ್ನು ಕಲಿಸುವಾಗ ಜನರು ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಸರಿಯಾಗಿ ವಿವರಿಸಿಕೊಡಲು ಉದಾಹರಣೆಗಳನ್ನು ಬಳಸಬೇಕೆಂದು ಈ ಹದೀಸ್ ತಿಳಿಸುತ್ತದೆ.
explain-icon

ವರ್ಗಗಳು

explain-icon

ಇನ್ನಷ್ಟು