ಮಗೂ! ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ಅಲ್ಲಾಹನ ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಂದು ದಿನ ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಭಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದೆ. ಆಗ ಅವರು ಹೇಳಿದರು: "ಮಗೂ! ನಾನು ನಿನಗೆ ಕೆಲವು ವಚನಗಳನ್ನು ಕಲಿಸುತ್ತೇನೆ. ಅಲ್ಲಾಹನ ಸಂರಕ್ಷಣೆ ಮಾಡು, ಅವನು ನಿನ್ನ ಸಂರಕ್ಷಣೆ ಮಾಡುವನು. ಅಲ್ಲಾಹನ ಸಂರಕ್ಷಣೆ ಮಾಡು, ಆಗ ನೀನು ಅವನನ್ನು ನಿನ್ನ ಮುಂಭಾಗದಲ್ಲಿ ಕಾಣಬಹುದು. ನೀನು ಬೇಡುವುದಾದರೆ ಅಲ್ಲಾಹನಲ್ಲಿ ಬೇಡು. ನೀನು ಸಹಾಯ ಯಾಚಿಸುವುದಾದರೆ, ಅಲ್ಲಾಹನಲ್ಲಿ ಸಹಾಯ ಯಾಚಿಸು. ತಿಳಿದುಕೋ! ನಿನಗೆ ಯಾವುದಾದರೂ ಉಪಕಾರ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನ್ನ ಪರವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ಉಪಕಾರ ಮಾಡಲು ಅವರಿಗೆ ಸಾಧ್ಯವಿಲ್ಲ. ನಿನಗೆ ಏನಾದರೂ ತೊಂದರೆ ಮಾಡಲು ಸಂಪೂರ್ಣ ಸಮುದಾಯವು ಒಗ್ಗಟ್ಟಾದರೂ ಕೂಡ, ಅಲ್ಲಾಹು ನಿನಗೆ ವಿರುದ್ಧವಾಗಿ ಏನು ಬರೆದಿಟ್ಟಿದ್ದಾನೋ ಅದಲ್ಲದೆ ಬೇರೇನೂ ತೊಂದರೆ ಮಾಡಲು ಅವರಿಗೆ ಸಾಧ್ಯವಿಲ್ಲ. ಲೇಖನಿಯನ್ನು ಎತ್ತಲಾಗಿದೆ ಮತ್ತು ಗ್ರಂಥಗಳು ಒಣಗಿವೆ."
Sahih/Authentic. - At-Tirmidhi

ಇಬ್ನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ಚಿಕ್ಕ ಹುಡುಗನಾಗಿದ್ದಾಗ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂದೆ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಾನು ನಿನಗೆ ಕೆಲವು ವಿಷಯಗಳನ್ನು ಕಲಿಸುತ್ತೇನೆ. ಅಲ್ಲಾಹು ಅವುಗಳನ್ನು ನಿನಗೆ ಪ್ರಯೋಜನಕಾರಿಯಾಗಿ ಮಾಡುವನು. ಅಲ್ಲಾಹನ ಆಜ್ಞೆಗಳನ್ನು ಪಾಲಿಸುವ ಮತ್ತು ಅವನ ನಿಷೇಧಗಳನ್ನು ತೊರೆಯುವ ಮೂಲಕ ಅವನನ್ನು ಸಂರಕ್ಷಿಸು. ಅವನು ನಿನ್ನನ್ನು ನೋಡುವಾಗ ನೀನು ಆರಾಧನೆ ಮತ್ತು ಧರ್ಮನಿಷ್ಠೆಯ ಕಾರ್ಯಗಳಲ್ಲಿರುವುದಾಗಿ ಕಾಣಬೇಕು. ನೀನು ಪಾಪ ಮತ್ತು ದುಷ್ಕೃತ್ಯಗಳಲ್ಲಿರುವುದಾಗಿ ಕಾಣಬಾರದು. ನೀನು ಹೀಗೆ ಮಾಡಿದರೆ, ಅದಕ್ಕೆ ಪ್ರತಿಫಲವಾಗಿ ಅಲ್ಲಾಹು ನಿನ್ನನ್ನು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ವಿಪತ್ತುಗಳು ಉಂಟಾಗದಂತೆ ರಕ್ಷಿಸುತ್ತಾನೆ. ನೀನು ಎಲ್ಲಿಗೆ ಹೋದರೂ ನಿನ್ನ ಕಾರ್ಯಗಳಲ್ಲಿ ಅವನು ನಿನಗೆ ಸಹಾಯ ಮಾಡುತ್ತಾನೆ. ನೀನು ಏನಾದರೂ ಕೇಳಲು ಬಯಸಿದರೆ, ಅಲ್ಲಾಹನಲ್ಲಿ ಹೊರತು ಯಾರಲ್ಲೂ ಕೇಳಬೇಡ. ಏಕೆಂದರೆ ಬೇಡುವವರಿಗೆ ಉತ್ತರ ನೀಡುವವನು ಅವನು ಮಾತ್ರ. ನಿನಗೆ ಏನಾದರೂ ಸಹಾಯ ಬೇಕಾದರೆ ಅಲ್ಲಾಹನ ಹೊರತು ಯಾರಲ್ಲೂ ಸಹಾಯ ಯಾಚಿಸಬೇಡ. ಭೂಮಿಯಲ್ಲಿರುವ ಎಲ್ಲರೂ ನಿನಗೊಂದು ಉಪಕಾರ ಮಾಡಲು ಬಯಸಿ ಒಟ್ಟುಗೂಡಿದರೆ, ಅಲ್ಲಾಹು ನಿನಗೆ ನಿಗದಿಪಡಿಸಿದ ಉಪಕಾರವನ್ನಲ್ಲದೆ ಬೇರೇನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ; ಮತ್ತು ಭೂಮಿಯಲ್ಲಿರುವ ಎಲ್ಲರೂ ನಿನಗೆ ತೊಂದರೆ ಮಾಡಲು ಬಯಸಿ ಒಟ್ಟುಗೂಡಿದರೆ, ಅಲ್ಲಾಹು ನಿನಗೆ ನಿರ್ಣಯಿಸಿದ ತೊಂದರೆಯನ್ನಲ್ಲದೆ ಬೇರೇನನ್ನೂ ಮಾಡಲು ಅವರಿಗೆ ಸಾಧ್ಯವಿಲ್ಲ ಎಂಬ ದೃಢವಿಶ್ವಾಸ ನಿನಗಿರಲಿ. ಸರ್ವಶಕ್ತನಾದ ಅಲ್ಲಾಹು ತನ್ನ ಯುಕ್ತಿ ಮತ್ತು ಜ್ಞಾನದ ಪ್ರಕಾರ ಇದನ್ನು ಈಗಾಗಲೇ ಲಿಖಿತಗೊಳಿಸಿದ್ದಾನೆ ಮತ್ತು ಈಗಾಗಲೇ ನಿರ್ಧರಿಸಿದ್ದಾನೆ. ಅಲ್ಲಾಹು ಲಿಖಿತಗೊಳಿಸಿದ್ದನ್ನು ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ.

  1. ಮಕ್ಕಳಿಗೆ ಏಕದೇವಾರಾಧನೆ, ಶಿಷ್ಟಾಚಾರ ಮುಂತಾದ ಧಾರ್ಮಿಕ ವಿಷಯಗಳನ್ನು ಕಲಿಸುವ ಮಹತ್ವವನ್ನು ಈ ಹದೀಸ್ ತಿಳಿಸುತ್ತದೆ.
  2. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ.
  3. ಅಲ್ಲಾಹನ ಮೇಲೆ ಅವಲಂಬಿತರಾಗಲು ಮತ್ತು ಅವನ ಮೇಲೆ ಮಾತ್ರ ಭರವಸೆಯಿಡಲು ಈ ಹದೀಸ್ ಆಜ್ಞಾಪಿಸುತ್ತದೆ. ಅವನು ಅತ್ಯುತ್ತಮ ಕಾರ್ಯನಿರ್ವಾಹಕನಾಗಿದ್ದಾನೆ.
  4. ಅಲ್ಲಾಹನ ತೀರ್ಮಾನ ಮತ್ತು ನಿರ್ಣಯದಲ್ಲಿ ವಿಶ್ವಾಸವಿಡಬೇಕು ಮತ್ತು ಅದರ ಬಗ್ಗೆ ತೃಪ್ತಿಯನ್ನು ಹೊಂದಿರಬೇಕು ಎಂದು, ಮತ್ತು ಅಲ್ಲಾಹು ಎಲ್ಲಾ ವಿಷಯಗಳನ್ನು ಈಗಾಗಲೇ ನಿರ್ಣಯಿಸಿದ್ದಾನೆಂದು ಈ ಹದೀಸ್ ತಿಳಿಸುತ್ತದೆ.
  5. ಯಾರು ಅಲ್ಲಾಹನ ಆಜ್ಞೆಗಳನ್ನು ನಿರ್ಲಕ್ಷಿಸುತ್ತಾನೋ, ಅವನನ್ನು ಅಲ್ಲಾಹು ನಿರ್ಲಕ್ಷಿಸುತ್ತಾನೆ. ಅವನು ಅವನ ಸಂರಕ್ಷಣೆಯನ್ನು ವಹಿಸಿಕೊಳ್ಳುವುದಿಲ್ಲ.

ಯಶಸ್ವಿಯಾಗಿ ರವಾನಿಸಲಾಗಿದೆ!