ಅಬೂ ಬಕ್ರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಇಬ್ಬರು ಮುಸ್ಲಿಮರು ತಮ್ಮ ಖಡ್ಗಗಳ ಮೂಲಕ ಪರಸ್ಪರ ಎದುರಾದರೆ, ಕೊಲೆಗಾರನು ಮತ್ತು ಕೊಲೆಯಾದವನು ಇಬ್ಬರೂ ನರಕಕ್ಕೆ ಹೋಗುತ್ತಾರೆ." ನಾನು ಕೇಳಿದೆ: "ಓ ಅಲ್ಲಾಹನ ಸಂದೇಶವಾಹಕರೇ! ಕೊಲೆಗಾರನು ನರಕಕ್ಕೆ ಹೋಗುವುದು ಸರಿ. ಆದರೆ ಕೊಲೆಯಾದವನು ಏಕೆ ನರಕಕ್ಕೆ ಹೋಗಬೇಕು?" ಅವರು ಉತ್ತರಿಸಿದರು: "ಏಕೆಂದರೆ ಅವನಿಗೆ ತನ್ನ ಎದುರಾಳಿಯನ್ನು ಕೊಲ್ಲಬೇಕೆಂಬ ಅತೀವ ಉತ್ಸಾಹವಿತ್ತು." Sahih/Authentic. - Al-Bukhari and Muslim
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಇಬ್ಬರು ಮುಸ್ಲಿಮರು ತಮ್ಮ ಖಡ್ಗಗಳ ಮೂಲಕ ಒಬ್ಬರು ಇನ್ನೊಬ್ಬರನ್ನು ಕೊಲ್ಲಬೇಕೆಂಬ ಉದ್ದೇಶದಿಂದ ಪರಸ್ಪರ ಎದುರಾದರೆ, ಕೊಲೆಗಾರನು ಕೊಲೆ ಮಾಡಿದ ಕಾರಣಕ್ಕಾಗಿ ನರಕವಾಸಿಯಾಗುತ್ತಾನೆ. ಆದರೆ ಕೊಲೆಯಾದವನು ಏಕೆ ನರಕವಾಸಿಯಾಗುತ್ತಾನೆಂಬ ವಿಷಯದಲ್ಲಿ ಸಂಗಡಿಗರಿಗೆ (ಸಹಾಬಾಗಳಿಗೆ) ಸಂಶಯವಾಯಿತು. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಉತ್ತರಿಸಿದರು: ಅವನು ನರಕಕ್ಕೆ ಹೋಗುವುದೇಕೆಂದರೆ, ಅವನು ಕೂಡ ತನ್ನ ಎದುರಾಳಿಯನ್ನು ಕೊಲ್ಲಬೇಕೆಂಬ ಅತೀವ ಉತ್ಸಾಹವನ್ನು ಹೊಂದಿದ್ದ. ಆದರೆ ಎದುರಾಳಿಯೇ ಮೊದಲು ಖಡ್ಗ ಬೀಸಿದ್ದರಿಂದ ಅವನು ಮೊದಲು ಸತ್ತುಹೋದ.

explain-icon

ಹದೀಸಿನ ಪ್ರಯೋಜನಗಳು

  • ಹೃದಯದಲ್ಲಿ ಪಾಪ ಮಾಡಲು ದೃಢನಿರ್ಧಾರ ತಾಳಿ ಅದನ್ನು ಕಾರ್ಯರೂಪಕ್ಕೆ ತರಲು ಸಿದ್ಧರಾಗುವವರು ಶಿಕ್ಷೆಗೆ ಅರ್ಹರಾಗುತ್ತಾರೆಂದು ಈ ಹದೀಸ್ ತಿಳಿಸುತ್ತದೆ.
  • ಮುಸ್ಲಿಮರು ಪರಸ್ಪರ ಯುದ್ಧ ಮಾಡುವುದರ ಬಗ್ಗೆ ಈ ಹದೀಸ್ ಗಂಭೀರ ಎಚ್ಚರಿಕೆ ನೀಡುತ್ತದೆ ಮತ್ತು ಅವರಿಗೆ ನರಕವಾಸದ ಬೆದರಿಕೆಯನ್ನೊಡ್ಡುತ್ತದೆ.
  • ಆದರೆ ಮುಸ್ಲಿಮರ ನಡುವೆ ಕಾನೂನುಬದ್ಧವಾಗಿ ನಡೆಯುವ ಯುದ್ಧಗಳು ಈ ಎಚ್ಚರಿಕೆಯಲ್ಲಿ ಒಳಪಡುವುದಿಲ್ಲ. ಉದಾಹರಣೆಗೆ, ದಂಗೆಕೋರರು ಮತ್ತು ಭ್ರಷ್ಟಾಚಾರಿಗಳ ವಿರುದ್ಧ ನಡೆಸುವ ಯುದ್ಧ.
  • ಮಹಾಪಾಪವನ್ನು ಮಾಡಿದರು ಎಂಬ ಕಾರಣಕ್ಕಾಗಿ ಯಾರೂ ಸತ್ಯನಿಷೇಧಿಯಾಗುವುದಿಲ್ಲವೆಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಯುದ್ಧ ಮಾಡುವವರನ್ನು ಮುಸ್ಲಿಮರು ಎಂದು ಕರೆದಿದ್ದಾರೆ.
  • ಕೊಲೆ ಸಂಭವಿಸುವ ಯಾವುದೇ ವಿಧಾನದ ಮೂಲಕ—ಅದು ಖಡ್ಗವೇ ಆಗಬೇಕೆಂದಿಲ್ಲ—ಮುಸ್ಲಿಮರಲ್ಲಿ ಒಬ್ಬರು ಇನ್ನೊಬ್ಬರನ್ನು ಎದುರಾದರೆ, ಕೊಲೆಗಾರನು ಮತ್ತು ಕೊಲೆಯಾದವನು ಇಬ್ಬರೂ ನರಕವಾಸಿಗಳಾಗುತ್ತಾರೆ. ಈ ಹದೀಸಿನಲ್ಲಿ ಖಡ್ಗ ಎಂದು ಹೇಳಿದ್ದು ಉದಾಹರಣೆಯಾಗಿ ಮಾತ್ರ.
explain-icon

ವರ್ಗಗಳು

explain-icon

ಇನ್ನಷ್ಟು