ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕೆಲವು ಕಾರ್ಯಗಳನ್ನು ಮಾಡುವುದು ಶಿರ್ಕ್ (ದೇವಸಹಭಾಗಿತ್ವ ಅಥವಾ ಬಹುದೇವಾರಾಧನೆ) ಎಂದು ಹೇಳಿದ್ದಾರೆ: ಮೊದಲನೆಯದು: ಮಂತ್ರ. ಅಂದರೆ ಅಜ್ಞಾನಕಾಲದ ಜನರು ರೋಗ ನಿವಾರಣೆಗಾಗಿ ಪಠಿಸುತ್ತಿದ್ದ ದೇವಸಹಭಾಗಿತ್ವವನ್ನು (ಶಿರ್ಕ್) ಒಳಗೊಂಡ ಪದಗಳಿರುವ ಮಂತ್ರಗಳು. ಎರಡನೆಯದು: ತಾಯಿತಗಳು. ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಮಕ್ಕಳು, ಪ್ರಾಣಿಗಳು ಮತ್ತು ಇತರ ವಸ್ತುಗಳಿಗೆ ಇವುಗಳನ್ನು ಕಟ್ಟಲಾಗುತ್ತದೆ. ಮೂರನೆಯದು: ತಿವ್ಲ. ಪತಿ-ಪತ್ನಿಯರಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವಂತೆ ಮಾಡುವ ತಂತ್ರ. ಇವೆಲ್ಲವೂ ಶಿರ್ಕ್ (ದೇವಸಹಭಾಗಿತ್ವ) ಆಗಿವೆ. ಏಕೆಂದರೆ, ಇಲ್ಲಿ ಕೆಲವು ವಿಷಯಗಳಿಗೆ ಕೆಲವು ವಿಷಯಗಳನ್ನು ಕಾರಣವನ್ನಾಗಿ ಮಾಡಲಾಗುತ್ತದೆ. ಆದರೆ ಅವು ಧಾರ್ಮಿಕ ಪುರಾವೆಗಳಿಂದ ಅಥವಾ ಪ್ರಾಯೋಗಿಕ ನೆಲೆಯಿಂದ ಸಾಬೀತಾದ ಕಾರಣಗಳಲ್ಲ. ಕುರ್ಆನ್ ಪಠಣ ಮುಂತಾದ ಧಾರ್ಮಿಕವಾಗಿ ಸಾಬೀತಾದ ಕಾರಣಗಳನ್ನು ಮತ್ತು ಔಷಧಿ ಸೇವನೆ ಮುಂತಾದ ಪ್ರಾಯೋಗಿಕವಾಗಿ ಸಾಬೀತಾದ ಕಾರಣಗಳನ್ನು ರೋಗ ನಿವಾರಣೆಗಾಗಿ ಬಳಸಬಹುದು. ಆದರೆ ಅವು ಕೇವಲ ಕಾರಣಗಳು ಮಾತ್ರ; ಲಾಭ ಮತ್ತು ಹಾನಿ ಅಲ್ಲಾಹನ ಕೈಯಲ್ಲಿದೆ ಎಂದು ವಿಶ್ವಾಸವಿಡುವುದು ಕಡ್ಡಾಯ.