(ವಿನಾಕಾರಣ) ತೊಂದರೆ ಕೊಡಬಾರದು ಮತ್ತು (ಪ್ರತೀಕಾರ ರೂಪದಲ್ಲೂ) ತೊಂದರೆ ಕೊಡಬಾರದು. ಯಾರು ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ...

ಅಬೂ ಸಈದ್ ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "(ವಿನಾಕಾರಣ) ತೊಂದರೆ ಕೊಡಬಾರದು ಮತ್ತು (ಪ್ರತೀಕಾರ ರೂಪದಲ್ಲೂ) ತೊಂದರೆ ಕೊಡಬಾರದು. ಯಾರು ತೊಂದರೆ ಕೊಡುತ್ತಾನೋ ಅವನಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ. ಯಾರು ಕಷ್ಟಗೊಳಿಸುತ್ತಾನೋ ಅವನಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ."
Sahih/Authentic. - Ibn Maajah

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಸ್ವಯಂ ತನಗೂ ಇತರರಿಗೂ ಉಂಟಾಗುವ ತೊಂದರೆಗಳ ಎಲ್ಲಾ ವಿಧಗಳನ್ನೂ, ರೂಪಗಳನ್ನೂ ತಡೆಗಟ್ಟುವುದು ಕಡ್ಡಾಯವಾಗಿದೆ ಮತ್ತು ಯಾವುದೇ ವ್ಯಕ್ತಿಯೂ ತನಗಾಗಲಿ ಅಥವಾ ಇತರರಿಗಾಗಲಿ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಅದೇ ರೀತಿ, ಯಾರಾದರೂ ತೊಂದರೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಅವನಿಗೆ ತೊಂದರೆ ಕೊಡುವುದು ಧರ್ಮಸಮ್ಮತವಲ್ಲ. ಏಕೆಂದರೆ, ತೊಂದರೆಯನ್ನು ತೊಂದರೆಯಿಂದ ನಿವಾರಿಸಲಾಗುವುದಿಲ್ಲ. ಆದರೆ ಹದ್ದು ಮೀರದ ರೀತಿಯಲ್ಲಿರುವ ಪ್ರತೀಕಾರ ಶಿಕ್ಷೆಗಳು ಇದಕ್ಕೆ ಹೊರತಾಗಿವೆ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜನರಿಗೆ ತೊಂದರೆ ಕೊಡುವವನಿಗೆ ತೊಂದರೆ ಉಂಟಾಗುತ್ತದೆ ಮತ್ತು ಜನರಿಗೆ ಕಷ್ಟ ಕೊಡುವವನು ಕಷ್ಟವನ್ನು ಅನುಭವಿಸುತ್ತಾನೆ ಎಂದು ಎಚ್ಚರಿಕೆ ನೀಡುತ್ತಾರೆ.

  1. ತೊಂದರೆ ಅನುಭವಿಸಿದ್ದಕ್ಕಿಂದ ಹೆಚ್ಚು ತೊಂದರೆ ಕೊಡುವ ಮೂಲಕ ಪ್ರತಿಕ್ರಿಯಿಸುವುದನ್ನು ಈ ಹದೀಸಿನಲ್ಲಿ ನಿಷೇಧಿಸಲಾಗಿದೆ.
  2. ದಾಸರಿಗೆ ತೊಂದರೆಯಾಗುವ ಯಾವುದೇ ಕಾರ್ಯವನ್ನೂ ಅಲ್ಲಾಹು ಆಜ್ಞಾಪಿಸಿಲ್ಲ.
  3. ಮಾತು, ಕ್ರಿಯೆ ಅಥವಾ ನಿಷ್ಕ್ರಿಯತೆಯಿಂದ ವಿನಾಕಾರಣ ಯಾರಿಗಾದರೂ ತೊಂದರೆ ಕೊಡುವುದನ್ನು ಮತ್ತು ಪ್ರತೀಕಾರದ ರೂಪದಲ್ಲಿ ತೊಂದರೆ ಕೊಡುವುದನ್ನು ಈ ಹದೀಸಿನಲ್ಲಿ ನಿಷೇಧಿಸಲಾಗಿದೆ.
  4. ಪ್ರತಿಫಲವು ಕರ್ಮದ ಅದೇ ವರ್ಗಕ್ಕೆ ಸೇರಿರುತ್ತದೆ. ಆದ್ದರಿಂದ, ಯಾರು ತೊಂದರೆ ಕೊಡುತ್ತಾರೋ, ಅವರಿಗೆ ಅಲ್ಲಾಹು ತೊಂದರೆ ಕೊಡುತ್ತಾನೆ ಮತ್ತು ಯಾರು ಕಷ್ಟಗೊಳಿಸುತ್ತಾರೋ, ಅವರಿಗೆ ಅಲ್ಲಾಹು ಕಷ್ಟಗೊಳಿಸುತ್ತಾನೆ.
  5. "ತೊಂದರೆಯನ್ನು ನಿವಾರಿಸಬೇಕು" ಎಂಬುದು ಇಸ್ಲಾಂ ಧರ್ಮದ ಸಿದ್ಧಾಂತಗಳಲ್ಲಿ ಒಂದಾಗಿದೆ. ಇಸ್ಲಾಂ ಧರ್ಮವು ತೊಂದರೆಯನ್ನು ಅಂಗೀಕರಿಸುವುದಿಲ್ಲ ಮತ್ತು ತೊಂದರೆ ಕೊಡುವುದನ್ನು ಕೂಡ ಅದು ಖಂಡಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!