ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಸೂರ್ಯ ಪಶ್ಚಿಮದಿಂದ ಉದಯವಾಗುವ ತನಕ ಪ್ರಳಯ ಸಂಭವಿಸುವುದಿಲ್ಲ. ಅದು ಉದಯವಾದಾಗ ಜನರೆಲ್ಲರೂ ಅದನ್ನು ನೋಡಿ ವಿಶ್ವಾಸವಿಡುತ್ತಾರೆ. ಅದು ಯಾವಾಗ ಎಂದರೆ: "ಮೊದಲೇ ವಿಶ್ವಾಸವಿಟ್ಟವರ ಅಥವಾ ತಮ್ಮ ವಿಶ್ವಾಸದ ಮೂಲಕ ಏನಾದರೂ ಒಳಿತನ್ನು ಮಾಡಿದವರ ಹೊರತು ಯಾವುದೇ ವ್ಯಕ್ತಿಗೂ ಅವನ ವಿಶ್ವಾಸವು ಪ್ರಯೋಜನ ನೀಡುವುದಿಲ್ಲ." [ಅನ್‌ಆಮ್ 158] (ಎಂದು ಅಲ್ಲಾಹು ಹೇಳಿದ ಸಮಯದಲ್ಲಾಗಿದೆ). ನಿಶ್ಚಯವಾಗಿಯೂ ಇಬ್ಬರು ವ್ಯಕ್ತಿಗಳು ಬಟ್ಟೆಯನ್ನು ಹರಡಿ ಅದನ್ನು ಖರೀದಿಸುವುದಕ್ಕೆ ಅಥವಾ ಅದನ್ನು ಮಡಚಿಡುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವುದಕ್ಕೆ ಮುಂಚೆಯೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಸರಿಪಡಿಸಿ (ಜಾನುವಾರುಗಳಿಗೆ) ನೀರುಣಿಸುವ ಮೊದಲೇ ಪ್ರಳಯವು ಸಂಭವಿಸುತ್ತದೆ. ನಿಶ್ಚಯವಾಗಿಯೂ ಒಬ್ಬ ವ್ಯಕ್ತಿ ಆಹಾರದ ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಪ್ರಳಯವು ಸಂಭವಿಸುತ್ತದೆ." Sahih/Authentic. - Al-Bukhari and Muslim
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮಹಾಪ್ರಳಯದ ಕೆಲವು ಚಿಹ್ನೆಗಳನ್ನು ವಿವರಿಸುತ್ತಾರೆ. ಅವುಗಳಲ್ಲೊಂದು ಸೂರ್ಯ ಪೂರ್ವದ ಬದಲು ಪಶ್ಚಿಮದಿಂದ ಉದಯವಾಗುವುದು. ಅದನ್ನು ನೋಡಿದಾಗ ಜನರೆಲ್ಲರೂ ವಿಶ್ವಾಸವಿಡುತ್ತಾರೆ. ಆ ಸಮಯದಲ್ಲಿ ವಿಶ್ವಾಸವಿಡುವುದರಿಂದ, ಸತ್ಕರ್ಮ ಮಾಡುವುದರಿಂದ ಅಥವಾ ಪಶ್ಚಾತಾಪ ಪಡುವುದರಿಂದ ಸತ್ಯನಿಷೇಧಿಗೆ ಯಾವುದೇ ಪ್ರಯೋಜನವಿಲ್ಲ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರಳಯವು ಹಠಾತ್ತಾಗಿ ಸಂಭವಿಸುತ್ತದೆ ಎಂದು ಹೇಳುತ್ತಾರೆ. ಅಂದರೆ, ಜನರು ಅವರ ದೈನಂದಿನ ಕೆಲಸಗಳಲ್ಲಿ ಮುಳುಗಿರುವಾಗಲೇ ಪ್ರಳಯ ಸಂಭವಿಸುತ್ತದೆ. ಬಟ್ಟೆ ವ್ಯಾಪಾರಿ ಗ್ರಾಹಕನಿಗೆ ಬಟ್ಟೆಯನ್ನು ಹರಡಿ ತೋರಿಸುತ್ತಿರುವಾಗ ಗ್ರಾಹಕ ಅದನ್ನು ಖರೀದಿಸುವುದಕ್ಕೆ ಮುಂಚೆ ಅಥವಾ ಮಡಚಿಡುವುದಕ್ಕೆ ಮುಂಚೆ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ಒಂಟೆಯ ಹಾಲನ್ನು ಕರೆದು ಅದನ್ನು ಕುಡಿಯುವಷ್ಟರಲ್ಲಿ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ತನ್ನ ನೀರಿನ ಕೊಳವನ್ನು ಗಾರೆಯಿಂದ ಸರಿಪಡಿಸಿ ಅದಕ್ಕೆ ನೀರು ತುಂಬುವ ಮೊದಲೇ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ. ಒಬ್ಬ ವ್ಯಕ್ತಿ ಆಹಾರ ಸೇವಿಸಲು ತುತ್ತನ್ನು ಎತ್ತಿ ಬಾಯಿಗಿಡುವ ಮೊದಲೇ ಹಠಾತ್ತಾಗಿ ಪ್ರಳಯವು ಸಂಭವಿಸುತ್ತದೆ.

explain-icon

ಹದೀಸಿನ ಪ್ರಯೋಜನಗಳು

  • ಸೂರ್ಯ ಪಶ್ಚಿಮದಿಂದ ಉದಯವಾಗುವವರೆಗೆ ವಿಶ್ವಾಸ ಮತ್ತು ಪಶ್ಚಾತ್ತಾಪವು ಸ್ವೀಕಾರವಾಗುತ್ತದೆಂದು ಈ ಹದೀಸ್ ತಿಳಿಸುತ್ತದೆ.
  • ವಿಶ್ವಾಸ ಮತ್ತು ಸತ್ಕರ್ಮಗಳ ಮೂಲಕ ಪ್ರಳಯಕ್ಕಾಗಿ ಸಿದ್ಧತೆ ಮಾಡಿಕೊಳ್ಳಲು ಈ ಹದೀಸ್ ಒತ್ತಾಯಿಸುತ್ತದೆ. ಏಕೆಂದರೆ ಪ್ರಳಯವು ಹಠಾತ್ತನೆ ಸಂಭವಿಸುತ್ತದೆ.
explain-icon

ವರ್ಗಗಳು

explain-icon

ಇನ್ನಷ್ಟು