ನ್ಯಾಯಯುತವಾಗಿ ವರ್ತಿಸುವವರು ಅಲ್ಲಾಹನ ಬಳಿ ಪ್ರಕಾಶದ ಪೀಠಗಳ ಮೇಲಿರುತ್ತಾರೆ. ಅವರು ಪರಮ ದಯಾಮಯನ ಬಲಭಾಗದಲ್ಲಿರುತ್ತಾರೆ. ಅಲ್ಲಾಹನ ಎರಡು ಕೈಗಳೂ ಬಲಗೈಗಳಾಗಿವೆ...

ಅಬ್ದುಲ್ಲಾ ಬಿನ್ ಅಮ್ರ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನ್ಯಾಯಯುತವಾಗಿ ವರ್ತಿಸುವವರು ಅಲ್ಲಾಹನ ಬಳಿ ಪ್ರಕಾಶದ ಪೀಠಗಳ ಮೇಲಿರುತ್ತಾರೆ. ಅವರು ಪರಮ ದಯಾಮಯನ ಬಲಭಾಗದಲ್ಲಿರುತ್ತಾರೆ. ಅಲ್ಲಾಹನ ಎರಡು ಕೈಗಳೂ ಬಲಗೈಗಳಾಗಿವೆ. ಅವರು ಯಾರೆಂದರೆ, ತಮ್ಮ ತೀರ್ಪಿನಲ್ಲಿ, ತಮ್ಮ ಜನರ ವಿಷಯದಲ್ಲಿ ಮತ್ತು ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ನ್ಯಾಯಯುತವಾಗಿ ವರ್ತಿಸುವವರು."
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ತಮ್ಮ ಅಧೀನದಲ್ಲಿರುವವರ ವಿಷಯದಲ್ಲಿ ಸತ್ಯ ಮತ್ತು ನ್ಯಾಯದಿಂದ ತೀರ್ಪು ನೀಡುವವರು ಮತ್ತು ಆಡಳಿತ ನಡೆಸುವವರು ಪ್ರಕಾಶದಿಂದ ಸೃಷ್ಟಿಸಲಾದ ಎತ್ತರದ ಪೀಠಗಳಲ್ಲಿ ಕುಳಿತಿರುತ್ತಾರೆ. ಇದು ಅವರಿಗೆ ಪುನರುತ್ಥಾನ ದಿನದಂದು ನೀಡಲಾಗುವ ಗೌರವವಾಗಿದೆ. ಈ ಪೀಠಗಳು ಪರಮ ದಯಾಮಯನಾದ ಅಲ್ಲಾಹನ ಬಲಭಾಗದಲ್ಲಿವೆ. ಸರ್ವಶಕ್ತನಾದ ಅಲ್ಲಾಹನ ಎರಡೂ ಕೈಗಳು ಬಲಗೈಗಳಾಗಿವೆ.

  1. ಈ ಹದೀಸ್ ನ್ಯಾಯದ ಶ್ರೇಷ್ಠತೆಯನ್ನು ತಿಳಿಸುತ್ತದೆ ಮತ್ತು ನ್ಯಾಯಯುತವಾಗಿ ವರ್ತಿಸಲು ಪ್ರೇರೇಪಿಸುತ್ತದೆ.
  2. ನ್ಯಾಯವು ಎಲ್ಲಾ ವಿಷಯಗಳನ್ನು ಒಳಗೊಳ್ಳುತ್ತದೆ. ಆಡಳಿತಗಾರರು ಪ್ರಜೆಗಳ ವಿಷಯದಲ್ಲಿ ತೋರಿಸುವ ನ್ಯಾಯದಿಂದ ತೊಡಗಿ ಪತ್ನಿ-ಮಕ್ಕಳ ಬಗ್ಗೆ ತೋರಿಸುವ ನ್ಯಾಯವೂ ಇದರಲ್ಲಿ ಒಳಪಡುತ್ತದೆ.
  3. ಪುನರುತ್ಥಾನ ದಿನದಂದು ನ್ಯಾಯವಂತರಿಗೆ ದೊರಕುವ ಉನ್ನತ ಸ್ಥಾನಮಾನವನ್ನು ಈ ಹದೀಸ್ ವಿವರಿಸುತ್ತದೆ.
  4. ಪುನರುತ್ಥಾನ ದಿನದಂದು ಸತ್ಯವಿಶ್ವಾಸಿಗಳಿಗೆ ಸಿಗುವ ಸ್ಥಾನಮಾನಗಳು ಅವರ ಕರ್ಮಗಳಿಗೆ ಅನುಗುಣವಾಗಿ ಹೆಚ್ಚು ಕಡಿಮೆಯಾಗಿರುತ್ತದೆಯೆಂದು ಈ ಹದೀಸ್ ತಿಳಿಸುತ್ತದೆ.
  5. ಜನರಿಗೆ ಒಳಿತು ಮಾಡಲು ಪ್ರಚೋದನೆ ಸಿಗುವುದಕ್ಕಾಗಿ ಪ್ರಚೋದನಾತ್ಮಕವಾಗಿ ಬೋಧನೆ ಮಾಡುವುದು ಧರ್ಮಪ್ರಚಾರದ ಒಂದು ಶೈಲಿಯೆಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!