ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸರ್ವಶಕ್ತನಾದ ಅಲ್ಲಾಹನ ಬಳಿ ತಮಗಿರುವ ಸ್ಥಾನಮಾನದ ಬಗ್ಗೆ ವಿವರಿಸುತ್ತಾರೆ. ಅವರು ಅಲ್ಲಾಹನ ಅತ್ಯಂತ ಆಪ್ತರ ಸ್ಥಾನವನ್ನು ತಲುಪಿದ್ದಾರೆ. ಇಬ್ರಾಹೀಂ (ಅವರ ಮೇಲೆ ಶಾಂತಿಯಿರಲಿ) ಕೂಡ ಈ ಸ್ಥಾನವನ್ನು ತಲುಪಿದ್ದರು. ಆದ್ದರಿಂದ ತನಗೆ ಅಲ್ಲಾಹನ ಹೊರತು ಬೇರೆ ಆಪ್ತಮಿತ್ರರು ಇರುವುದನ್ನು ಅವರು ನಿಷೇಧಿಸುತ್ತಾರೆ. ಏಕೆಂದರೆ, ಅವರ ಹೃದಯದಲ್ಲಿ ಅಲ್ಲಾಹನ ಪ್ರೀತಿ, ಗೌರವ ಮತ್ತು ಜ್ಞಾನವು ತುಂಬಿಕೊಂಡಿದೆ. ಅಲ್ಲಿ ಅಲ್ಲಾಹನ ಹೊರತು ಬೇರೆ ಯಾರಿಗೂ ಸ್ಥಳವಿಲ್ಲ. ಒಂದು ವೇಳೆ ಜನರಲ್ಲಿ ಯಾರನ್ನಾದರೂ ಆಪ್ತಮಿತ್ರನನ್ನಾಗಿ ಮಾಡಿಕೊಳ್ಳಲು ಬಯಸುತ್ತಿದ್ದರೆ, ಅವರು ಅಬೂಬಕರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನೇ ಆರಿಸುತ್ತಿದ್ದರು. ನಂತರ ಅವರು ಎಲ್ಲೆ ಮೀರುವ ಪ್ರೀತಿಯ ಬಗ್ಗೆ ಎಚ್ಚರಿಕೆ ನೀಡಿದರು. ಎಲ್ಲೆ ಮೀರಿದ ಪ್ರೀತಿಯಿಂದಲೇ ಯಹೂದಿಗಳು ಮತ್ತು ಕ್ರಿಶ್ಚಿಯನ್ನರು ಅವರ ಪ್ರವಾದಿಗಳ ಹಾಗೂ ಮಹಾಪುರುಷರ ಸಮಾಧಿಗಳನ್ನು ಎಲ್ಲೆ ಮೀರಿ ಗೌರವಿಸಿದರು. ಹೀಗೆ ಅವು ಅಲ್ಲಾಹನ ಹೊರತಾಗಿ ಆರಾಧಿಸಲ್ಪಡುವ ದೇವರುಗಳಾಗಿ ಪರಿವರ್ತನೆ ಹೊಂದಿದವು; ಮತ್ತು ಅವರು ಆ ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ಹಾಗೂ ಮಠಗಳನ್ನು ನಿರ್ಮಿಸಿದರು. ನಂತರ ಅವರಂತೆ ನೀವಾಗಬಾರದು ಎಂಬ ಕಾರಣಕ್ಕೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದನ್ನು ತಮ್ಮ ಸಮುದಾಯಕ್ಕೆ ವಿರೋಧಿಸಿದರು.