ಯಾರು ಇಸ್ಲಾಂ ಧರ್ಮದಲ್ಲಿ ಒಳಿತು ಮಾಡುತ್ತಾನೋ, ಅವನನ್ನು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುವುದಿಲ್ಲ. ಆದರೆ ಯಾರು ಇಸ್ಲಾಂ ಧರ್ಮದಲ್ಲಿ ಕೆಡುಕು ಮಾಡುತ್ತಾನೋ, ಅವನನ್ನು ಹಿಂದಿನ ಮತ್ತು ನಂತರದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುತ್ತದೆ...

ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಹೇಳಿದರು: ಒಬ್ಬ ವ್ಯಕ್ತಿ ಕೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ! ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ನಮ್ಮನ್ನು ಶಿಕ್ಷಿಸಲಾಗುವುದೇ?" ಅವರು ಉತ್ತರಿಸಿದರು: "ಯಾರು ಇಸ್ಲಾಂ ಧರ್ಮದಲ್ಲಿ ಒಳಿತು ಮಾಡುತ್ತಾನೋ, ಅವನನ್ನು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುವುದಿಲ್ಲ. ಆದರೆ ಯಾರು ಇಸ್ಲಾಂ ಧರ್ಮದಲ್ಲಿ ಕೆಡುಕು ಮಾಡುತ್ತಾನೋ, ಅವನನ್ನು ಹಿಂದಿನ ಮತ್ತು ನಂತರದ ದುಷ್ಕರ್ಮಗಳಿಗಾಗಿ ಶಿಕ್ಷಿಸಲಾಗುತ್ತದೆ."
Sahih/Authentic. - Al-Bukhari and Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರ ಶ್ರೇಷ್ಠತೆಯನ್ನು ವಿವರಿಸುತ್ತಿದ್ದಾರೆ. ಅಂದರೆ ಒಬ್ಬ ವ್ಕಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ನಂತರ ಇಸ್ಲಾಂ ಧರ್ಮದಲ್ಲಿ ನಿಷ್ಕಳಂಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಒಳ್ಳೆಯ ಕರ್ಮಗಳನ್ನು ಮಾಡಿದರೆ, ಅಜ್ಞಾನ ಕಾಲದಲ್ಲಿ (ಇಸ್ಲಾಮೀ ಪೂರ್ವ ಕಾಲದಲ್ಲಿ) ಮಾಡಿದ ಪಾಪಗಳು ಮತ್ತು ದುಷ್ಕರ್ಮಗಳಿಗಾಗಿ ಅವನು ವಿಚಾರಣೆ ಎದುರಿಸಬೇಕಾಗಿ ಬರುವುದಿಲ್ಲ. ಆದರೆ ಒಬ್ಬ ವ್ಯಕ್ತಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಕೆಟ್ಟ ಕೃತ್ಯಗಳನ್ನು ಮಾಡಿದರೆ, ಅಂದರೆ ಅವನು ಕಪಟ ವಿಶ್ವಾಸಿಯಾದರೆ ಅಥವಾ ಧರ್ಮಪರಿತ್ಯಾಗಿಯಾದರೆ, ಅವನು ಸತ್ಯನಿಷೇಧದಲ್ಲಿದ್ದಾಗ ಮಾಡಿದ ದುಷ್ಕರ್ಮಗಳಿಗೆ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ನಂತರ ಮಾಡಿದ ದುಷ್ಕರ್ಮಗಳಿಗೆ ವಿಚಾರಣೆ ಎದುರಿಸಬೇಕಾಗುತ್ತದೆ.

  1. ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳ ಬಗ್ಗೆ ಸಹಾಬಿಗಳಿಗೆ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇದ್ದ ಕಾಳಜಿ ಮತ್ತು ಆತಂಕವನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.
  2. ಇಸ್ಲಾಂ ಧರ್ಮದಲ್ಲಿ ದೃಢವಾಗಿ ನಿಲ್ಲಲು ಈ ಹದೀಸ್ ಪ್ರೇರೇಪಿಸುತ್ತದೆ.
  3. ಈ ಹದೀಸ್ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದರ ಶ್ರೇಷ್ಠತೆಯನ್ನು ಹಾಗೂ ಅದು ಹಿಂದಿನ ಪಾಪಗಳನ್ನು ಪರಿಹಾರ ಮಾಡುತ್ತದೆಯೆಂಬುದನ್ನು ವಿವರಿಸುತ್ತದೆ.
  4. ಧರ್ಮಪರಿತ್ಯಾಗಿಗಳು ಮತ್ತು ಕಪಟ ವಿಶ್ವಾಸಿಗಳು ಅಜ್ಞಾನ ಕಾಲದಲ್ಲಿ ಮಾಡಿದ ದುಷ್ಕರ್ಮಗಳಿಗೂ ಮತ್ತು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ ಬಳಿಕ ಮಾಡಿದ ಪಾಪಗಳಿಗೂ ವಿಚಾರಣೆ ಎದುರಿಸಬೇಕಾಗುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!