ಖೌಲ ಅನ್ಸಾರಿಯ್ಯ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: “ನಿಶ್ಚಯವಾಗಿಯೂ ಅಲ್ಲಾಹನ ಆಸ್ತಿಯಲ್ಲಿ ಲಂಗು-ಲಗಾಮಿಲ್ಲದೆ ವ್ಯವಹರಿಸುವ ಜನರು ಯಾರೋ ಅವರಿಗೆ ಪುನರುತ್ಥಾನ ದಿನದಂದು ನರಕಾಗ್ನಿಯಿದೆ.” Sahih/Authentic. - Al-Bukhari
explain-icon

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಮುಸಲ್ಮಾನರ ಹಣದಲ್ಲಿ ಲಂಗುಲಗಾಮಿಲ್ಲದೆ ವ್ಯವಹರಿಸುವವರು ಮತ್ತು ಅನ್ಯಾಯವಾಗಿ ತಿನ್ನುವವರ ಬಗ್ಗೆ ತಿಳಿಸುತ್ತಾರೆ. ಅನುಚಿತ ಮೂಲಗಳಿಂದ ಸಂಗ್ರಹಿಸುವ ಮತ್ತು ಸಂಪಾದಿಸುವ, ಅನುಚಿತ ವಿಷಯಗಳಿಗಾಗಿ ಖರ್ಚು ಮಾಡುವ ಹಣಗಳೆಲ್ಲವೂ ಇದರ ವ್ಯಾಪ್ತಿಯಲ್ಲಿ ಬರುತ್ತದೆ. ಅನಾಥರ ಆಸ್ತಿಯನ್ನು ತಿನ್ನುವುದು, ವಕ್ಫ್ ಆಸ್ತಿಯನ್ನು ಕಬಳಿಸುವುದು, ವಿಶ್ವಾಸದಿಂದ ಒಪ್ಪಿಸಲಾದ ವಸ್ತುಗಳನ್ನು ಹಿಂದಿರುಗಿಸದಿರುವುದು, ಸಾರ್ವಜನಿಕ ಆಸ್ತಿಯನ್ನು ಅನರ್ಹ ವಿಧಾನಗಳ ಮೂಲಕ ವಶಪಡಿಸುವುದು ಎಲ್ಲವೂ ಇದರಲ್ಲಿ ಒಳಪಡುತ್ತವೆ. ನಂತರ, ಪುನರುತ್ಥಾನ ದಿನದಂದು ಅದಕ್ಕೆ ಪ್ರತಿಫಲವಾಗಿ ಅವರನ್ನು ನರಕಕ್ಕೆ ತಳ್ಳಲಾಗುತ್ತದೆ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸುತ್ತಾರೆ.

explain-icon

ಹದೀಸಿನ ಪ್ರಯೋಜನಗಳು

  • ಜನರ ಕೈಯಲ್ಲಿರುವ ಆಸ್ತಿ ವಾಸ್ತವವಾಗಿ ಅಲ್ಲಾಹನ ಆಸ್ತಿಯಾಗಿದೆ. ಧಾರ್ಮಿಕವಾಗಿ ಅಂಗೀಕರಿಸಲಾದ ಮಾರ್ಗಗಳಲ್ಲಿ ಅದನ್ನು ಖರ್ಚು ಮಾಡಬೇಕು ಮತ್ತು ಧಾರ್ಮಿಕವಲ್ಲದ ಮಾರ್ಗಗಳಲ್ಲಿ ಅದನ್ನು ಖರ್ಚು ಮಾಡಬಾರದೆಂಬ ಷರತ್ತಿನೊಂದಿಗೆ ಅಲ್ಲಾಹು ಅದನ್ನು ಅವರಿಗೆ ನೀಡಿದ್ದಾನೆ. ಇದು ಆಡಳಿತಗಾರರು ಮತ್ತು ಸಾಮಾನ್ಯ ಜನರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.
  • ಸಾರ್ವಜನಿಕ ಆಸ್ತಿಯ ಬಗ್ಗೆ ಇಸ್ಲಾಂ ಧರ್ಮವು ಕಠೋರ ನಿಲುವನ್ನು ಹೊಂದಿದೆ. ಸಾರ್ವಜನಿಕ ಆಸ್ತಿಯ ನಿರ್ವಹಣೆಯನ್ನು ವಹಿಸಿಕೊಂಡವರನ್ನು ಅವರು ಅದನ್ನು ಹೇಗೆ ಸಂಗ್ರಹಿಸಿದರು ಮತ್ತು ಖರ್ಚು ಮಾಡಿದರೆಂದು ಪುನರುತ್ಥಾನ ದಿನದಂದು ವಿಚಾರಣೆ ಮಾಡಲಾಗುತ್ತದೆ.
  • ಹಣವನ್ನು ಧಾರ್ಮಿಕವಲ್ಲದ ಮಾರ್ಗಗಳಲ್ಲಿ ಖರ್ಚು ಮಾಡುವ ಎಲ್ಲರಿಗೂ ಈ ಎಚ್ಚರಿಕೆ ಅನ್ವಯಿಸುತ್ತದೆ. ಅದು ಅವರದ್ದೇ ಹಣವಾಗಿದ್ದರೂ ಅಥವಾ ಇತರರ ಹಣವಾಗಿದ್ದರೂ ಸಹ.
explain-icon

ವರ್ಗಗಳು

explain-icon

ಇನ್ನಷ್ಟು