ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಓ ಅಲ್ಲಾಹ್, ನನ್ನ ಸಮಾಧಿಯನ್ನು ವಿಗ್ರಹವನ್ನಾಗಿ ಮಾಡಬೇಡ. ತಮ್ಮ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಅಲ್ಲಾಹು ಶಪಿಸಿದ್ದಾನೆ."
Sahih/Authentic. - Ahmad

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನನ್ನ ಸಮಾಧಿಯನ್ನು ವಿಗ್ರಹದಂತೆ ಮಾಡಬೇಡ ಎಂದು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಾರೆ. ಅಂದರೆ, ಜನರು ಅತಿಯಾಗಿ ಮಹತ್ವ ನೀಡುತ್ತಾ (ವೈಭವೀಕರಿಸುತ್ತಾ) ಮತ್ತು ಅಭಿಮುಖೀಕರಿಸಿ ಸಾಷ್ಟಾಂಗ ಮಾಡುತ್ತಾ ಆರಾಧಿಸುವ ವಿಗ್ರಹದಂತೆ ಮಾಡಬೇಡ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಗತ ಪ್ರವಾದಿಗಳ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡಿಕೊಂಡ ಜನರನ್ನು ಸರ್ವಶಕ್ತನಾದ ಅಲ್ಲಾಹು ಶಪಿಸಿದ್ದಾನೆ, ಅಂದರೆ ಅವರನ್ನು ತನ್ನ ಕರುಣೆಯಿಂದ ದೂರಗೊಳಿಸಿದ್ದಾನೆ ಎಂದು ತಿಳಿಸುತ್ತಾರೆ. ಏಕೆಂದರೆ ಸಮಾಧಿಗಳನ್ನು ಆರಾಧನಾಲಯಗಳನ್ನಾಗಿ ಮಾಡುವುದರಿಂದ ಜನರು ಅವುಗಳನ್ನು ಆರಾಧಿಸಲು ಮತ್ತು ಅವುಗಳ ಬಗ್ಗೆ ಮಿಥ್ಯನಂಬಿಕೆಗಳನ್ನು ಹೊಂದಲು ಕಾರಣವಾಗುತ್ತದೆ.

  1. ಪ್ರವಾದಿಗಳ ಮತ್ತು ಮಹಾಪುರುಷರ ಸಮಾಧಿಗಳ ವಿಷಯದಲ್ಲಿ ಧರ್ಮವು ನಿಶ್ಚಯಿಸಿದ ಎಲ್ಲೆಯನ್ನು ಮೀರಿ ವರ್ತಿಸುವುದು, ಅಲ್ಲಾಹನ ಹೊರತು ಅವುಗಳನ್ನು ಆರಾಧಿಸಲು ಕಾರಣವಾಗುತ್ತದೆ ಎಂದು ಈ ಹದೀಸಿನಲ್ಲಿ ಎಚ್ಚರಿಸಲಾಗಿದೆ. ಆದ್ದರಿಂದ, ಬಹುದೇವಾರಾಧನೆಗೆ ಕಾರಣವಾಗುವ ಇಂತಹ ಮಾರ್ಗಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ.
  2. ಸಮಾಧಿ ಯಾರದ್ದೇ ಆಗಿದ್ದರೂ, ಅವರು ಅಲ್ಲಾಹನಿಗೆ ಎಷ್ಟೇ ನಿಕಟರಾಗಿದ್ದರೂ, ಅವರ ಸಮಾಧಿಗಳನ್ನು ಗೌರವಿಸುವುದಕ್ಕಾಗಿ ಅಥವಾ ಅಲ್ಲಿ ಆರಾಧನೆ ಸಲ್ಲಿಸುವುದಕ್ಕಾಗಿ ಯಾತ್ರೆ ಮಾಡುವುದನ್ನು ಇಸ್ಲಾಂ ಧರ್ಮವು ಅನುಮತಿಸುವುದಿಲ್ಲ.
  3. ಸಮಾಧಿಗಳ ಮೇಲೆ ಆರಾಧನಾಲಯಗಳನ್ನು ನಿರ್ಮಿಸುವುದನ್ನು ಈ ಹದೀಸ್‌ನಲ್ಲಿ ನಿಷೇಧಿಸಲಾಗಿದೆ.
  4. ಸಮಾಧಿಯ ಬಳಿ ನಮಾಝ್ ಮಾಡುವುದನ್ನೂ ಈ ಹದೀಸ್‌ನಲ್ಲಿ ನಿಷೇಧಿಸಲಾಗಿದೆ. ಅಲ್ಲಿ ಮಸೀದಿ ಇದ್ದರೂ ಇಲ್ಲದಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಆದರೆ ಜನಾಝ ನಮಾಝ್ (ಅಂತ್ಯಕ್ರಿಯೆಯ ನಮಾಝ್) ನಿರ್ವಹಿಸಲ್ಪಡದ ವ್ಯಕ್ತಿಗಾಗಿ ಆತನ ಸಮಾಧಿಯ ಬಳಿ ಜನಾಝ ನಮಾಝ್ ನಿರ್ವಹಿಸಬಹುದು.

ಯಶಸ್ವಿಯಾಗಿ ರವಾನಿಸಲಾಗಿದೆ!