ಆಯಿಶ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಂದೆ ಕುಳಿತುಕೊಂಡು ಹೇಳಿದರು: "ಓ ಅಲ್ಲಾಹನ ಸಂದೇಶವಾಹಕರೇ, ನನ್ನ ಅಧೀನದಲ್ಲಿ ಇಬ್ಬರು ಗುಲಾಮರಿದ್ದಾರೆ. ಅವರು ನನ್ನಲ್ಲಿ ಸುಳ್ಳು ಹೇಳುತ್ತಾರೆ, ನನಗೆ ಮೋಸ ಮಾಡುತ್ತಾರೆ ಮತ್ತು ನನ್ನ ಮಾತನ್ನು ಕೇಳುವುದಿಲ್ಲ. ನಾನು ಅವರಿಗೆ ಗದರಿಸುತ್ತೇನೆ ಮತ್ತು ಹೊಡೆಯುತ್ತೇನೆ. ಅವರಿಗೆ ಸಂಬಂಧಿಸಿದಂತೆ ನನ್ನ ಸ್ಥಿತಿಯೇನು?" ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಉತ್ತರಿಸಿದರು: "ಅವರು ಮೋಸ ಮಾಡಿದ್ದು, ತಮ್ಮ ಮಾತನ್ನು ಕೇಳದೇ ಇದ್ದದ್ದು ಮತ್ತು ತಮ್ಮಲ್ಲಿ ಸುಳ್ಳು ಹೇಳಿದ್ದನ್ನು ನೀವು ಅವರಿಗೆ ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ. ನೀವು ನೀಡುವ ಶಿಕ್ಷೆಯು ಅವರು ಮಾಡಿದ ಪಾಪಗಳಷ್ಟೇ ಇದ್ದರೆ ಎರಡೂ ಸಮಾನವಾಗುತ್ತದೆ. ಅದರಲ್ಲಿ ನಿಮಗೆ ಪ್ರತಿಫಲ ಅಥವಾ ಶಿಕ್ಷೆಯಿಲ್ಲ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಕಡಿಮೆ ಇದ್ದರೆ ನಿಮಗೆ ಪ್ರತಿಫಲವಿದೆ. ನೀವು ನೀಡುವ ಶಿಕ್ಷೆಯು ಅವರ ಪಾಪಗಳಿಗಿಂತ ಹೆಚ್ಚಿದ್ದರೆ ಪ್ರತೀಕಾರವಾಗಿ ನಿಮ್ಮ ಕೆಲವು ಪುಣ್ಯಕಾರ್ಯಗಳನ್ನು ಅವರಿಗೆ ನೀಡಲಾಗುತ್ತದೆ." ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿ ಈ ವಚನವನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ." ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ." Sahih/Authentic. - At-Tirmidhi
explain-icon

ವಿವರಣೆ

ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತನ್ನ ಗುಲಾಮರ ವರ್ತನೆಯ ಬಗ್ಗೆ ದೂರು ನೀಡುತ್ತಾರೆ. ಅವರು ಸುಳ್ಳು ಹೇಳುತ್ತಾರೆ, ನಂಬಿಕೆ ಇಟ್ಟರೆ ಮೋಸ ಮಾಡುತ್ತಾರೆ, ವ್ಯವಹಾರಗಳಲ್ಲಿ ವಂಚನೆ ಮಾಡುತ್ತಾರೆ, ಹೇಳಿದ ಮಾತನ್ನು ಕೇಳುವುದಿಲ್ಲ ಎನ್ನುತ್ತಾರೆ. ಅವರನ್ನು ಶಿಸ್ತಿನಲ್ಲಿಡುವುದಕ್ಕಾಗಿ ತಾನು ಅವರಿಗೆ ಗದರಿಸುತ್ತಲೂ ಥಳಿಸುತ್ತಲೂ ಇರುತ್ತೇನೆಂದು ಹೇಳುತ್ತಾರೆ. ಆದ್ದರಿಂದ ಪುನರುತ್ಥಾನ ದಿನ ತನ್ನ ಸ್ಥಿತಿ ಏನಾಗಿರಬಹುದು ಎಂದು ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುತ್ತಾರೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: ಅವರು ಮಾಡಿದ ವಂಚನೆ, ಅವಿಧೇಯತೆ ಮತ್ತು ಸುಳ್ಳನ್ನು ನೀವು ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ. ಅವರ ಪಾಪಗಳು ಮತ್ತು ನಿಮ್ಮ ಶಿಕ್ಷೆಯು ಸರಿಸಮವಾದರೆ ತಮಗೆ ಪ್ರತಿಫಲವಾಗಲಿ ಶಿಕ್ಷೆಯಾಗಲಿ ಇಲ್ಲ. ನೀವು ನೀಡಿದ ಶಿಕ್ಷೆಯು ಅವರು ಮಾಡಿದ ಪಾಪಗಳಿಗಿಂತ ಕಡಿಮೆಯಿದ್ದರೆ ನಿಮಗೆ ಹೆಚ್ಚುವರಿ ಪ್ರತಿಫಲವಿದೆ. ನೀವು ನೀಡಿದ ಶಿಕ್ಷೆಯು ಅವರು ಮಾಡಿದ ಪಾಪಗಳಿಗಿಂತ ಹೆಚ್ಚಿದ್ದರೆ ನಿಮ್ಮನ್ನು ಶಿಕ್ಷಿಸಲಾಗುತ್ತದೆ; ಆ ಹೆಚ್ಚುವರಿಯನ್ನು ನಿಮ್ಮ ಪುಣ್ಯಕಾರ್ಯಗಳಿಂದ ತೆಗೆದು ಅವರಿಗೆ ನೀಡಲಾಗುತ್ತದೆ. ಆಗ ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿರುವುದನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. ಅದು (ಕರ್ಮವು) ಒಂದು ಸಾಸಿವೆ ಕಾಳಿನಷ್ಟು ತೂಕವಿದ್ದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಸಾಕು." [ಅಲ್-ಅಂಬಿಯಾ:47]. ಪುನರುತ್ಥಾನ ದಿನದಂದು ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ. ಜನರ ನಡುವೆ ತಕ್ಕಡಿಗಳನ್ನು ನ್ಯಾಯಬದ್ಧವಾಗಿ ಸ್ಥಾಪಿಸಲಾಗುವುದು. ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ಅಲ್ಲಾಹನ ಸಂಪ್ರೀತಿಗಾಗಿ ಮತ್ತು ಪರಲೋಕದ ವಿಚಾರಣೆ ಹಾಗೂ ಶಿಕ್ಷೆಯ ಭಯದಿಂದ ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."

explain-icon

ಹದೀಸಿನ ಪ್ರಯೋಜನಗಳು

  • ಅಲ್ಲಾಹನ ಶಿಕ್ಷೆಯ ಭಯದಿಂದ ತನ್ನ ಗುಲಾಮರನ್ನು ಸ್ವತಂತ್ರಗೊಳಿಸಿದ ಆ ಸಹಾಬಿಯ ಪ್ರಾಮಾಣಿಕತೆಯನ್ನು ಈ ಹದೀಸ್ ತಿಳಿಸುತ್ತದೆ.
  • ಒಬ್ಬ ವ್ಯಕ್ತಿ ಅನ್ಯಾಯ ಮಾಡಿದರೆ ಅದಕ್ಕೆ ಸಮಾನವಾಗಿ ಅಥವಾ ಅದಕ್ಕಿಂತ ಕಡಿಮೆ ಪ್ರತೀಕಾರ ಪಡೆಯಲು ಅನುಮತಿ ಇದೆ. ಆದರೆ ಅದು ಅದಕ್ಕಿಂತ ಹೆಚ್ಚಾಗುವುದನ್ನು ನಿಷೇಧಿಸಲಾಗಿದೆ.
  • ಸೇವಕರು ಮತ್ತು ದುರ್ಬಲರೊಡನೆ ಉತ್ತಮವಾಗಿ ವರ್ತಿಸಲು ಈ ಹದೀಸ್ ಪ್ರೇರೇಪಿಸುತ್ತದೆ.
explain-icon

ವರ್ಗಗಳು

explain-icon

ಇನ್ನಷ್ಟು