ಒಬ್ಬ ವ್ಯಕ್ತಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತನ್ನ ಗುಲಾಮರ ವರ್ತನೆಯ ಬಗ್ಗೆ ದೂರು ನೀಡುತ್ತಾರೆ. ಅವರು ಸುಳ್ಳು ಹೇಳುತ್ತಾರೆ, ನಂಬಿಕೆ ಇಟ್ಟರೆ ಮೋಸ ಮಾಡುತ್ತಾರೆ, ವ್ಯವಹಾರಗಳಲ್ಲಿ ವಂಚನೆ ಮಾಡುತ್ತಾರೆ, ಹೇಳಿದ ಮಾತನ್ನು ಕೇಳುವುದಿಲ್ಲ ಎನ್ನುತ್ತಾರೆ. ಅವರನ್ನು ಶಿಸ್ತಿನಲ್ಲಿಡುವುದಕ್ಕಾಗಿ ತಾನು ಅವರಿಗೆ ಗದರಿಸುತ್ತಲೂ ಥಳಿಸುತ್ತಲೂ ಇರುತ್ತೇನೆಂದು ಹೇಳುತ್ತಾರೆ. ಆದ್ದರಿಂದ ಪುನರುತ್ಥಾನ ದಿನ ತನ್ನ ಸ್ಥಿತಿ ಏನಾಗಿರಬಹುದು ಎಂದು ಅವರು ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳುತ್ತಾರೆ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳುತ್ತಾರೆ: ಅವರು ಮಾಡಿದ ವಂಚನೆ, ಅವಿಧೇಯತೆ ಮತ್ತು ಸುಳ್ಳನ್ನು ನೀವು ನೀಡಿದ ಶಿಕ್ಷೆಯೊಂದಿಗೆ ಅಳೆಯಲಾಗುತ್ತದೆ. ಅವರ ಪಾಪಗಳು ಮತ್ತು ನಿಮ್ಮ ಶಿಕ್ಷೆಯು ಸರಿಸಮವಾದರೆ ತಮಗೆ ಪ್ರತಿಫಲವಾಗಲಿ ಶಿಕ್ಷೆಯಾಗಲಿ ಇಲ್ಲ. ನೀವು ನೀಡಿದ ಶಿಕ್ಷೆಯು ಅವರು ಮಾಡಿದ ಪಾಪಗಳಿಗಿಂತ ಕಡಿಮೆಯಿದ್ದರೆ ನಿಮಗೆ ಹೆಚ್ಚುವರಿ ಪ್ರತಿಫಲವಿದೆ. ನೀವು ನೀಡಿದ ಶಿಕ್ಷೆಯು ಅವರು ಮಾಡಿದ ಪಾಪಗಳಿಗಿಂತ ಹೆಚ್ಚಿದ್ದರೆ ನಿಮ್ಮನ್ನು ಶಿಕ್ಷಿಸಲಾಗುತ್ತದೆ; ಆ ಹೆಚ್ಚುವರಿಯನ್ನು ನಿಮ್ಮ ಪುಣ್ಯಕಾರ್ಯಗಳಿಂದ ತೆಗೆದು ಅವರಿಗೆ ನೀಡಲಾಗುತ್ತದೆ. ಆಗ ಆ ವ್ಯಕ್ತಿ ಸ್ವಲ್ಪ ದೂರ ಹೋಗಿ ಗಟ್ಟಿಯಾಗಿ ಅಳತೊಡಗಿದರು. ಆಗ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನೀವು ಅಲ್ಲಾಹನ ಗ್ರಂಥದಲ್ಲಿರುವುದನ್ನು ಪಠಿಸಿಲ್ಲವೇ? "ಪುನರುತ್ಥಾನ ದಿನದಂದು ನಾವು ನ್ಯಾಯಬದ್ಧವಾದ ತಕ್ಕಡಿಗಳನ್ನು ಸ್ಥಾಪಿಸುವೆವು. ಆಗ ಯಾರಿಗೂ ಸ್ವಲ್ಪವೂ ಅನ್ಯಾಯವಾಗುವುದಿಲ್ಲ. ಅದು (ಕರ್ಮವು) ಒಂದು ಸಾಸಿವೆ ಕಾಳಿನಷ್ಟು ತೂಕವಿದ್ದರೂ ನಾವು ಅದನ್ನು ತರುವೆವು. ವಿಚಾರಣೆ ಮಾಡುವವರಾಗಿ ನಾವು ಸಾಕು." [ಅಲ್-ಅಂಬಿಯಾ:47]. ಪುನರುತ್ಥಾನ ದಿನದಂದು ಯಾರಿಗೂ ಯಾವುದೇ ಅನ್ಯಾಯವಾಗುವುದಿಲ್ಲ. ಜನರ ನಡುವೆ ತಕ್ಕಡಿಗಳನ್ನು ನ್ಯಾಯಬದ್ಧವಾಗಿ ಸ್ಥಾಪಿಸಲಾಗುವುದು. ಆಗ ಆ ವ್ಯಕ್ತಿ ಹೇಳಿದರು: "ಅಲ್ಲಾಹನಾಣೆ! ಓ ಅಲ್ಲಾಹನ ಸಂದೇಶವಾಹಕರೇ, ಅವರನ್ನು ಸ್ವತಂತ್ರಗೊಳಿಸುವುದಲ್ಲದೆ ನನಗಾಗಲಿ ಅವರಿಗಾಗಲಿ ಯಾವುದೇ ಒಳಿತನ್ನು ನಾನು ಕಾಣುತ್ತಿಲ್ಲ. ಅಲ್ಲಾಹನ ಸಂಪ್ರೀತಿಗಾಗಿ ಮತ್ತು ಪರಲೋಕದ ವಿಚಾರಣೆ ಹಾಗೂ ಶಿಕ್ಷೆಯ ಭಯದಿಂದ ನಾನು ನಿಮ್ಮನ್ನು ಸಾಕ್ಷಿಯಾಗಿಸಿ ಅವರೆಲ್ಲರನ್ನೂ ಸ್ವತಂತ್ರಗೊಳಿಸುತ್ತಿದ್ದೇನೆ."