ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಹತ್ತು ಬಾರಿ — ಲಾ ಇಲಾಹ ಇಲ್ಲಲ್ಲಾಹು ವಹ್ದಹೂ ಲಾ ಶರೀಕ ಲಹೂ, ಲಹುಲ್ ಮುಲ್ಕು ವಲಹುಲ್ ಹಮ್ದು ವಹುವ ಅಲಾ ಕುಲ್ಲಿ ಶೈಇನ್ ಕದೀರ್ ಎಂದು ಹೇಳುತ್ತಾನೋ, (ಇದರ ಅರ್ಥ: ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರೂ ಆರಾಧನೆಗೆ ಅರ್ಹರಲ್ಲ, ಅವನು ಏಕೈಕನು ಮತ್ತು ಅವನಿಗೆ ಯಾವುದೇ ಸಹಭಾಗಿಗಳಿಲ್ಲ; ಅವನು ಸಂಪೂರ್ಣ ಪ್ರಪಂಚದ ಒಡೆಯನಾಗಿದ್ದಾನೆ, ಪ್ರೀತಿ ಮತ್ತು ಮಹಿಮೆಯೊಂದಿಗೆ ಎಲ್ಲಾ ರೀತಿಯ ಪ್ರಶಂಸೆಗಳಿಗೆ ಅವನು ಮಾತ್ರ ಅರ್ಹನಾಗಿದ್ದಾನೆ, ಅವನು ಶಕ್ತಿಶಾಲಿಯಾಗಿದ್ದು ಅವನ ಹಿಡಿತದಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ). ದಿನದಲ್ಲಿ ಹತ್ತು ಬಾರಿ ಈ ದಿಕ್ರ್ ಪಠಿಸುವವನು ಇಬ್ರಾಹೀಮರ ಮಗನಾದ ಇಸ್ಮಾಯೀಲರ (ಅವರಿಬ್ಬರ ಮೇಲೂ ಶಾಂತಿಯಿರಲಿ) ಸಂತಾನದಿಂದ ನಾಲ್ಕು ಗುಲಾಮರನ್ನು ಸ್ವತಂತ್ರಗೊಳಿಸಿದ ಪ್ರತಿಫಲಕ್ಕೆ ಸಮಾನವಾದ ಪ್ರತಿಫಲವನ್ನು ಪಡೆಯುತ್ತಾನೆ. ಇಲ್ಲಿ ಇಸ್ಮಾಯೀಲರ (ಅವರ ಮೇಲೆ ಶಾಂತಿಯಿರಲಿ) ಸಂತಾನವನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದೇಕೆಂದರೆ, ಅವರು ಇತರರಿಗಿಂತ ಶ್ರೇಷ್ಠರಾಗಿದ್ದಾರೆ.