ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ...

ತಾರಿಕ್ ಬಿನ್ ಅಶೀಮ್ ಅಶ್ಜಈ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಯಾರು ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ ಎಂದು ಹೇಳುತ್ತಾರೋ ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುತ್ತಾರೋ, ಅವರ ಆಸ್ತಿ ಮತ್ತು ಪ್ರಾಣವು ಪವಿತ್ರವಾಗಿವೆ. ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ."
Sahih/Authentic. - Muslim

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, "ಲಾ ಇಲಾಹ ಇಲ್ಲಲ್ಲಾಹ್" (ಅಲ್ಲಾಹನ ಹೊರತು ಆರಾಧಿಸಲು ಅರ್ಹರಾದ ಅನ್ಯ ಆರಾಧ್ಯರಿಲ್ಲ) ಎಂದು ಸಾಕ್ಷಿವಹಿಸಿ ನಾಲಿಗೆಯಿಂದ ಉಚ್ಛರಿಸುವವರು ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುವವರು ಹಾಗೂ ಇಸ್ಲಾಂ ಧರ್ಮದ ಹೊರತು ಬೇರೆ ಎಲ್ಲಾ ಧರ್ಮಗಳಿಂದ ದೂರ ಸರಿಯುವವರು ಯಾರೋ ಅವರ ಆಸ್ತಿ ಮತ್ತು ಪ್ರಾಣವು ಇತರ ಮುಸಲ್ಮಾನರಿಗೆ ಪವಿತ್ರವಾಗಿವೆ. ನಾವು ಅವರ ಬಾಹ್ಯ ಕರ್ಮಗಳನ್ನು ನೋಡಿ ನಿರ್ಧರಿಸಬೇಕು. ಅವರ ಆಸ್ತಿ ಮತ್ತು ಪ್ರಾಣವನ್ನು ತೆಗೆಯಲು ಯಾರಿಗೂ ಅನುಮತಿಯಿಲ್ಲ. ಇಸ್ಲಾಮೀ ಕಾನೂನಿನ ಪ್ರಕಾರ ಶಿಕ್ಷೆಯ ರೂಪದಲ್ಲಿ ಅವರ ಆಸ್ತಿ ಮತ್ತು ಪ್ರಾಣವನ್ನು ತೆಗೆಯಲು ಅನುಮತಿ ನೀಡುವ ಯಾವುದಾದರೂ ಅಪರಾಧವನ್ನು ಅವರು ಮಾಡಿದ ಹೊರತು. ಪುನರುತ್ಥಾನ ದಿನದಂದು ಅವರನ್ನು ವಿಚಾರಣೆ ಮಾಡುವ ಹೊಣೆ ಅಲ್ಲಾಹನದ್ದಾಗಿದೆ. ಅವರು ಸತ್ಯವಿಶ್ವಾಸಿಗಳಾಗಿದ್ದರೆ ಅವರಿಗೆ ಪ್ರತಿಫಲವಿದೆ. ಅವರು ಕಪಟವಿಶ್ವಾಸಿಗಳಾಗಿದ್ದರೆ ಅವರಿಗೆ ಶಿಕ್ಷೆಯಿದೆ.

  1. "ಲಾ ಇಲಾಹ ಇಲ್ಲಲ್ಲಾಹ್" ಉಚ್ಛರಿಸುವುದು ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುವುದು ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಕ್ಕಿರುವ ಷರತ್ತುಗಳಾಗಿವೆ.
  2. "ಲಾ ಇಲಾಹ ಇಲ್ಲಲ್ಲಾಹ್" ಎಂದರೆ ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ವಿಗ್ರಹಗಳು, ಸಮಾಧಿಗಳು ಮುಂತಾದ ಎಲ್ಲವನ್ನೂ ನಿಷೇಧಿಸಿ ಏಕೈಕನಾದ ಅಲ್ಲಾಹನನ್ನು ಮಾತ್ರ ಆರಾಧಿಸುವುದು.
  3. ಒಬ್ಬ ವ್ಯಕ್ತಿ ಏಕದೇವ ವಿಶ್ವಾಸವನ್ನು ಸ್ವೀಕರಿಸಿ ಬಹಿರಂಗವಾಗಿ ಇಸ್ಲಾಂ ಧರ್ಮದ ಕಾನೂನುಗಳನ್ನು ಪಾಲಿಸಿದರೆ, ಅವನು ಅದಕ್ಕೆ ವಿರುದ್ಧವಾದುದನ್ನು ಮಾಡಿದ್ದಾನೆಂದು ಸಾಬೀತಾಗುವ ತನಕ ಅವನ ಪ್ರಾಣಕ್ಕೆ ಕುತ್ತು ಮಾಡಬಾರದೆಂದು ಈ ಹದೀಸ್ ತಿಳಿಸುತ್ತದೆ.
  4. ಮುಸಲ್ಮಾನನ ಆಸ್ತಿ, ಪ್ರಾಣ ಮತ್ತು ಮಾನವು ಪವಿತ್ರವಾಗಿದ್ದು ಕಾನೂನಿಗೆ ಅನುಗುಣವಾಗಿಯೇ ಹೊರತು ಅವುಗಳಿಗೆ ಚ್ಯುತಿ ಮಾಡಬಾರದೆಂದು ಈ ಹದೀಸ್ ತಿಳಿಸುತ್ತದೆ.
  5. ಇಹಲೋಕದಲ್ಲಿ ವ್ಯಕ್ತಿಯ ಬಾಹ್ಯ ವರ್ತನೆಯನ್ನು ನೋಡಿ ತೀರ್ಪು ನೀಡಲಾಗುತ್ತದೆ. ಆದರೆ ಪರಲೋಕದಲ್ಲಿ ಅವನ ಆಂತರಂಗದ ಸಂಕಲ್ಪ ಮತ್ತು ಉದ್ದೇಶವನ್ನು ನೋಡಿ ತೀರ್ಪು ನೀಡಲಾಗುತ್ತದೆ.

ಯಶಸ್ವಿಯಾಗಿ ರವಾನಿಸಲಾಗಿದೆ!