ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏಳು ವಿನಾಶಕಾರಿ ಅಪರಾಧ ಮತ್ತು ಪಾಪಗಳಿಂದ ದೂರವಿರಲು ಆಜ್ಞಾಪಿಸುತ್ತಿದ್ದಾರೆ. ಅವು ಯಾವುವು ಎಂದು ಅವರೊಡನೆ ಪ್ರಶ್ನಿಸಲಾದಾಗ, ಅವರು ಈ ಕೆಳಗಿನಂತೆ ವಿವರಿಸಿದರು: ಮೊದಲನೆಯದು: ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು. ಅಂದರೆ, ಸರ್ವಶಕ್ತನಾದ ಅಲ್ಲಾಹನಿಗೆ—ಯಾವುದೇ ರೂಪದಲ್ಲಾದರೂ—ಸಮಾನರನ್ನು ಮತ್ತು ಸರಿಸಾಟಿಗಳನ್ನು ನಿಶ್ಚಯಿಸುವುದು. ಅಥವಾ ಆರಾಧನೆಯ ಯಾವುದಾದರೂ ಒಂದು ವಿಧವನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸುವುದು. ಶಿರ್ಕ್ (ಸಹಭಾಗಿತ್ವ) ಅತಿ ಭಯಾನಕ ಪಾಪವಾಗಿರುವುದರಿಂದ ಪ್ರವಾದಿಯವರು ಅದನ್ನು ಮೊಟ್ಟಮೊದಲು ತಿಳಿಸಿದ್ದಾರೆ. ಎರಡನೆಯದು: ಮಾಟಗಾರಿಕೆ (ವಾಮಾಚಾರ) ಮಾಡುವುದು. ಗಂಟುಗಳಲ್ಲಿ ಊದುವುದು, ಮಂತ್ರ ಮಾಡುವುದು, ಪ್ರೇತಗಳನ್ನು ಬಳಸಿ ಚಿಕಿತ್ಸೆ ಮಾಡುವುದು, ಹೊಗೆಯಾಡಿಸುವುದು ಮುಂತಾದ ಎಲ್ಲವೂ ಇದರಲ್ಲಿ ಒಳಪಡುತ್ತವೆ. ಇದರಿಂದಾಗಿ ಕೆಲವೊಮ್ಮೆ ಮಾಟ ಮಾಡಲ್ಪಟ್ಟ ವ್ಯಕ್ತಿ ಸಾಯುತ್ತಾನೆ ಅಥವಾ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಕೆಲವೊಮ್ಮೆ ಇದರಿಂದ ಪತಿ-ಪತ್ನಿಯರ ನಡುವೆ ಒಡಕುಂಟಾಗುತ್ತದೆ. ಇದೊಂದು ಪೈಶಾಚಿಕ ಪ್ರವೃತ್ತಿಯಾಗಿದ್ದು, ಬಹುದೇವಾರಾಧನೆ ಮತ್ತು ದುಷ್ಟಶಕ್ತಿಗಳನ್ನು ತೃಪ್ತಿಪಡಿಸುವ ಮೂಲಕವಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ಮೂರನೆಯದು: ಅಲ್ಲಾಹು ಹತ್ಯೆ ಮಾಡಬಾರದೆಂದು ಹೇಳಿದ ಮನುಷ್ಯ ಜೀವಿಯನ್ನು ಆಡಳಿತಗಾರರು ಕಾನೂನುಬದ್ಧವಾಗಿ ಹೊರಡಿಸುವ ಆಜ್ಞೆಯ ಮೂಲಕವಲ್ಲದೆ ಕೊಲೆಗೈಯ್ಯುವುದು. ನಾಲ್ಕನೆಯದು: ಬಡ್ಡಿ ಪಡೆಯುವುದು. ಅದು ನೇರವಾಗಿ ಪಡೆಯುವುದಾಗಿದ್ದರೂ ಅಥವಾ ಬೇರೆ ಯಾವುದಾದರೂ ಪ್ರಯೋಜನಗಳನ್ನು ಪಡೆಯುವ ಮೂಲಕವಾಗಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಐದನೆಯದು: ತಂದೆಯನ್ನು ಕಳಕೊಂಡ ಅಪ್ರಾಪ್ತ ಮಕ್ಕಳ ಆಸ್ತಿಯನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಮತ್ತು ಕಬಳಿಸುವುದು. ಆರನೆಯದು: ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡುವಾಗ ಯುದ್ಧರಂಗದಿಂದ ಪಲಾಯನ ಮಾಡುವುದು. ಏಳನೆಯದು: ಪರಿಶುದ್ಧ ಮತ್ತು ಕುಲೀನ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಮಾಡುವುದು; ಅದೇ ರೀತಿ, ಪುರುಷರ ಮೇಲೂ.