ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: “ಏಳು ವಿನಾಶಕಾರಿ ಪಾಪಗಳಿಂದ ದೂರವಿರಿ” ಅವರು (ಸಂಗಡಿಗರು) ಕೇಳಿದರು: “ಓ ಅಲ್ಲಾಹನ ಸಂದೇಶವಾಹಕರೇ! ಅವು ಯಾವುವು?” ಅವರು ಹೇಳಿದರು: “ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು; ಮಾಟಗಾರಿಕೆ (ವಾಮಾಚಾರ) ಮಾಡುವುದು; ಅಲ್ಲಾಹು (ಹತ್ಯೆ ಮಾಡುವುದು) ನಿಷೇಧಿಸಿದ ಮನುಷ್ಯ ಜೀವಿಯನ್ನು ನೈತಿಕ ಹಕ್ಕಿನಿಂದಲ್ಲದೆ ಹತ್ಯೆ ಮಾಡುವುದು; ಬಡ್ಡಿ ತಿನ್ನುವುದು; ಅನಾಥರ ಆಸ್ತಿಯನ್ನು ತಿನ್ನುವುದು; ಯುದ್ಧಭೂಮಿಯಿಂದ ಪಲಾಯನ ಮಾಡುವುದು; ಮತ್ತು ಪರಿಶುದ್ಧ, ಮುಗ್ಧ ಹಾಗೂ ಸತ್ಯವಿಶ್ವಾಸಿಗಳಾದ ಮಹಿಳೆಯರ ಮೇಲೆ ದುರಾರೋಪ ಹೊರಿಸುವುದು.” Sahih/Authentic. - Al-Bukhari and Muslim
explain-icon

ವಿವರಣೆ

ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಏಳು ವಿನಾಶಕಾರಿ ಅಪರಾಧ ಮತ್ತು ಪಾಪಗಳಿಂದ ದೂರವಿರಲು ಆಜ್ಞಾಪಿಸುತ್ತಿದ್ದಾರೆ. ಅವು ಯಾವುವು ಎಂದು ಅವರೊಡನೆ ಪ್ರಶ್ನಿಸಲಾದಾಗ, ಅವರು ಈ ಕೆಳಗಿನಂತೆ ವಿವರಿಸಿದರು: ಮೊದಲನೆಯದು: ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವುದು. ಅಂದರೆ, ಸರ್ವಶಕ್ತನಾದ ಅಲ್ಲಾಹನಿಗೆ—ಯಾವುದೇ ರೂಪದಲ್ಲಾದರೂ—ಸಮಾನರನ್ನು ಮತ್ತು ಸರಿಸಾಟಿಗಳನ್ನು ನಿಶ್ಚಯಿಸುವುದು. ಅಥವಾ ಆರಾಧನೆಯ ಯಾವುದಾದರೂ ಒಂದು ವಿಧವನ್ನು ಅಲ್ಲಾಹು ಅಲ್ಲದವರಿಗೆ ಅರ್ಪಿಸುವುದು. ಶಿರ್ಕ್ (ಸಹಭಾಗಿತ್ವ) ಅತಿ ಭಯಾನಕ ಪಾಪವಾಗಿರುವುದರಿಂದ ಪ್ರವಾದಿಯವರು ಅದನ್ನು ಮೊಟ್ಟಮೊದಲು ತಿಳಿಸಿದ್ದಾರೆ. ಎರಡನೆಯದು: ಮಾಟಗಾರಿಕೆ (ವಾಮಾಚಾರ) ಮಾಡುವುದು. ಗಂಟುಗಳಲ್ಲಿ ಊದುವುದು, ಮಂತ್ರ ಮಾಡುವುದು, ಪ್ರೇತಗಳನ್ನು ಬಳಸಿ ಚಿಕಿತ್ಸೆ ಮಾಡುವುದು, ಹೊಗೆಯಾಡಿಸುವುದು ಮುಂತಾದ ಎಲ್ಲವೂ ಇದರಲ್ಲಿ ಒಳಪಡುತ್ತವೆ. ಇದರಿಂದಾಗಿ ಕೆಲವೊಮ್ಮೆ ಮಾಟ ಮಾಡಲ್ಪಟ್ಟ ವ್ಯಕ್ತಿ ಸಾಯುತ್ತಾನೆ ಅಥವಾ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಕೆಲವೊಮ್ಮೆ ಇದರಿಂದ ಪತಿ-ಪತ್ನಿಯರ ನಡುವೆ ಒಡಕುಂಟಾಗುತ್ತದೆ. ಇದೊಂದು ಪೈಶಾಚಿಕ ಪ್ರವೃತ್ತಿಯಾಗಿದ್ದು, ಬಹುದೇವಾರಾಧನೆ ಮತ್ತು ದುಷ್ಟಶಕ್ತಿಗಳನ್ನು ತೃಪ್ತಿಪಡಿಸುವ ಮೂಲಕವಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ಮೂರನೆಯದು: ಅಲ್ಲಾಹು ಹತ್ಯೆ ಮಾಡಬಾರದೆಂದು ಹೇಳಿದ ಮನುಷ್ಯ ಜೀವಿಯನ್ನು ಆಡಳಿತಗಾರರು ಕಾನೂನುಬದ್ಧವಾಗಿ ಹೊರಡಿಸುವ ಆಜ್ಞೆಯ ಮೂಲಕವಲ್ಲದೆ ಕೊಲೆಗೈಯ್ಯುವುದು. ನಾಲ್ಕನೆಯದು: ಬಡ್ಡಿ ಪಡೆಯುವುದು. ಅದು ನೇರವಾಗಿ ಪಡೆಯುವುದಾಗಿದ್ದರೂ ಅಥವಾ ಬೇರೆ ಯಾವುದಾದರೂ ಪ್ರಯೋಜನಗಳನ್ನು ಪಡೆಯುವ ಮೂಲಕವಾಗಿದ್ದರೂ ಅದರಲ್ಲಿ ವ್ಯತ್ಯಾಸವಿಲ್ಲ. ಐದನೆಯದು: ತಂದೆಯನ್ನು ಕಳಕೊಂಡ ಅಪ್ರಾಪ್ತ ಮಕ್ಕಳ ಆಸ್ತಿಯನ್ನು ಬೇಕಾಬಿಟ್ಟಿ ಖರ್ಚು ಮಾಡುವುದು ಮತ್ತು ಕಬಳಿಸುವುದು. ಆರನೆಯದು: ಸತ್ಯನಿಷೇಧಿಗಳ ವಿರುದ್ಧ ಯುದ್ಧ ಮಾಡುವಾಗ ಯುದ್ಧರಂಗದಿಂದ ಪಲಾಯನ ಮಾಡುವುದು. ಏಳನೆಯದು: ಪರಿಶುದ್ಧ ಮತ್ತು ಕುಲೀನ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಮಾಡುವುದು; ಅದೇ ರೀತಿ, ಪುರುಷರ ಮೇಲೂ.

explain-icon

ಹದೀಸಿನ ಪ್ರಯೋಜನಗಳು

  • ಮಹಾಪಾಪಗಳು ಈ ಹದೀಸಿನಲ್ಲಿರುವ ಏಳು ಪಾಪಗಳಿಗೆ ಸೀಮಿತವಲ್ಲ. ಈ ಏಳು ಪಾಪಗಳು ಗಂಭೀರ ಮತ್ತು ಅಪಾಯಕಾರಿ ಪಾಪಗಳಾಗಿರುವುದರಿಂದ ಅವುಗಳನ್ನು ವಿಶೇಷವಾಗಿ ಇಲ್ಲಿ ಉಲ್ಲೇಖಿಸಲಾಗಿದೆ.
  • ಕಾನೂನುಬದ್ಧವಾಗಿ ಮನುಷ್ಯ ಹತ್ಯೆ ಮಾಡಲು ಅನುಮತಿಯಿದೆ. ಉದಾಹರಣೆಗೆ, ಪ್ರತೀಕಾರವಾಗಿ, ಧರ್ಮಪರಿತ್ಯಾಗ ಮಾಡಿದ್ದಕ್ಕಾಗಿ, ವಿವಾಹವಾದ ನಂತರ ವ್ಯಭಿಚಾರ ಮಾಡಿದ್ದಕ್ಕಾಗಿ ಇತ್ಯಾದಿ. ಆದರೆ ಇಂತಹ ಸಂದರ್ಭಗಳಲ್ಲಿ ಕಾನೂನುಬದ್ಧ ಆಡಳಿತಗಾರ ಮಾತ್ರ ಮರಣ ಶಾಸನವನ್ನು ಹೊರಡಿಸಬೇಕು.
explain-icon

ವರ್ಗಗಳು

explain-icon

ಇನ್ನಷ್ಟು