ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಸಂಗಡಿಗರ ನಡುವೆ ಕುಳಿತುಕೊಂಡಿದ್ದರು. ಆಗ ಅವರು ಹೇಳಿದರು: "ಇಂತಿಂತಹ ಸಮಯದಲ್ಲಿ ಜನರಿಂದ ಜ್ಞಾನವನ್ನು ಎತ್ತಿಕೊಳ್ಳಲಾಗುವುದು ಮತ್ತು ಹಿಂಪಡೆಯಲಾಗುವುದು." ಆಗ ಝಿಯಾದ್ ಬಿನ್ ಲಬೀದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಗೆ ಆಶ್ಚರ್ಯವಾಯಿತು. ಅವರು ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು: "ನಮ್ಮಿಂದ ಜ್ಞಾನವು ಎತ್ತಲಾಗುವುದು ಮತ್ತು ನಾವು ಅದನ್ನು ಕಳೆದುಕೊಳ್ಳುವುದು ಹೇಗೆ? ನಾವಂತೂ ಕುರ್ಆನ್ ಪಠಿಸಿದ್ದೇವೆ ಮತ್ತು ಕಂಠಪಾಠ ಮಾಡಿದ್ದೇವೆ. ಅಲ್ಲಾಹನಾಣೆ! ನಾವು ಅದನ್ನು ಪಠಿಸುತ್ತಲೇ ಇರುತ್ತೇವೆ. ನಮ್ಮ ಮಹಿಳೆಯರಿಗೆ, ಮಕ್ಕಳಿಗೆ, ಮೊಮ್ಮಕ್ಕಳಿಗೆ ಅದನ್ನು ಕಲಿಸುತ್ತಲೇ ಇರುತ್ತೇವೆ." ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆಶ್ಚರ್ಯದಿಂದ ಕೇಳಿದರು: "ನಿಮ್ಮ ತಾಯಿ ನಿಮ್ಮನ್ನು ಕಳೆದುಕೊಳ್ಳಲಿ. ಓ ಝಿಯಾದ್! ನಾನು ತಮ್ಮನ್ನು ಮದೀನದ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಿದ್ದೆ!" ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ವಿವರಿಸುತ್ತಾ ಹೇಳಿದರು: "ಜ್ಞಾನವು ಕಳೆದುಹೋಗುವುದು ಕುರ್ಆನ್ ಕಳೆದುಹೋಗುವುದರಿಂದಲ್ಲ. ಬದಲಿಗೆ, ಜ್ಞಾನವು ಕಳೆದುಹೋಗುವುದು ಅದರಂತೆ ಕರ್ಮ ಮಾಡದಿರುವಾಗ. ಯಹೂದಿಗಳ ಮತ್ತು ಕ್ರೈಸ್ತರ ಬಳಿ ಈ ತೌರಾತ್ ಮತ್ತು ಇಂಜೀಲ್ ಇದೆ. ಆದರೂ ಅವರಿಗೆ ಅದು ಪ್ರಯೋಜನ ನೀಡುವುದಿಲ್ಲ. ಅದರ ಉದ್ದೇಶಕ್ಕಾಗಿ ಅವರು ಅದನ್ನು ಬಳಸಲಿಲ್ಲ. ಅಂದರೆ ಅದರಿಂದ ಅವರು ಪಡೆದ ಜ್ಞಾನದ ಪ್ರಕಾರ ಅವರು ಕರ್ಮವೆಸಗಲಿಲ್ಲ.