ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹಿಂಬಾಗದಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ಅವರು "ಓ ಮುಆದ್" ಎಂದು ಕರೆದರು. ತಾನು ಹೇಳಲು ಹೋಗುವ ವಿಷಯದ ಪ್ರಾಮುಖ್ಯತೆಗೆ ಒತ್ತು ಕೊಡುವುದಕ್ಕಾಗಿ ಅವರು ಹೀಗೆ ಮೂರು ಬಾರಿ ಕರೆದರು. ಅವರು ಪ್ರತಿ ಬಾರಿ ಕರೆದಾಗಲೂ ಮುಆದ್, "ಲಬ್ಬೈಕ ಯಾ ರಸೂಲಲ್ಲಾಹ್ ವ ಸಅದೈಕ" ಎಂದು ಉತ್ತರಿಸುತ್ತಿದ್ದರು. ಅಂದರೆ ಓ ಪ್ರವಾದಿಯವರೇ ನಾನು ಪದೇ ಪದೇ ನಿಮ್ಮ ಕರೆಗೆ ಉತ್ತರಿಸುತ್ತೇನೆ. ನಿಮ್ಮ ಕರೆಗೆ ಉತ್ತರಿಸುವುದೇ ನನ್ನ ಸೌಭಾಗ್ಯವಾಗಿದೆ ಎಂದರ್ಥ. ಆಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದರು: "ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ) ಮತ್ತು ಮುಹಮ್ಮದ್ ರಸೂಲುಲ್ಲಾಹ್ (ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ) ಎಂದು ತನ್ನ ಹೃದಯದಿಂದ ಪ್ರಾಮಾಣಿಕವಾಗಿ, ಯಾವುದೇ ಕಾಪಟ್ಯವಿಲ್ಲದೆ ಸಾಕ್ಷಿ ವಹಿಸಿ, ನಂತರ ಅದೇ ಸ್ಥಿತಿಯಲ್ಲಿ ಮರಣಹೊಂದುವವನನ್ನು ಅಲ್ಲಾಹು ನರಕಾಗ್ನಿಗೆ ನಿಷಿದ್ಧಗೊಳಿಸುತ್ತಾನೆ." "ಜನರು ಈ ಸುದ್ದಿಯನ್ನು ಕೇಳಿ ಸಂತೋಷಪಡುವುದಕ್ಕಾಗಿ ನಾನು ಅವರಿಗೆ ಇದನ್ನು ತಿಳಿಸಲೇ ಎಂದು ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಪ್ರವಾದಿಯವರೊಂದಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೇಳಿದರು. ಆಗ ಜನರು ಇದರ ಮೇಲೆ ಅವಲಂಬಿತರಾಗಿ ಕರ್ಮವೆಸಗುವುದನ್ನು ಕಡಿಮೆ ಮಾಡುವರೋ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಭಯಪಟ್ಟರು. ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ನಿಧನರಾಗುವ ತನಕ ಈ ಹದೀಸನ್ನು ಯಾರಿಗೂ ತಿಳಿಸಲಿಲ್ಲ. ಆದರೆ ಜ್ಞಾನವನ್ನು ಬಚ್ಚಿಟ್ಟ ಪಾಪಕ್ಕೆ ಗುರಿಯಾಗುವೆನೋ ಎಂಬ ಭಯದಿಂದ ಮರಣದ ಸಮಯದಲ್ಲಿ ತಿಳಿಸಿಕೊಟ್ಟರು.